ಆಗಸ್ಟ್ 06 ಮಂಗಳವಾರ, ಮೈಸೂರು
ಮೈಸೂರಿನಲ್ಲಿ 6ನೇ ದಿನದ ಮತ್ತೆ ಕಲ್ಯಾಣ ಸಂವಾದ - ಅನನ್ಯ ಟಿವಿ ನೇರಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಾಗರೀಕತೆ ಬಾಹ್ಯ ಬದುಕನ್ನು ಎತ್ತರಿಸಿದರೆ, ಸಂಸ್ಕೃತಿ ಆಂತರಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದು ಇವೆರಡರ ಸಮನ್ವಯವಾಗಬೇಕು. ನಾಗರೀಕತೆಯ ನಾಗಾಲೋಟದಿಂದ ಸ್ವರ್ಗ ಮುಟ್ಟಲು ಸಾಧ್ಯವಿಲ್ಲ. ನಾನು ಪರಿಶುದ್ಧನಾಗದೆ ಲೋಕಕಲ್ಯಾಣವೆಂಬುದು ಒಂದು ಭ್ರಮೆ. ಬಸವಣ್ಣನವರದು ತಾಯ್ತನದ ಹೃದಯ. ಜಗದ ತಪ್ಪನ್ನು ತಮ್ಮ ಮೇಲೆ ಹಾಕಿಕೊಂಡು ಇತರರಿಗೆ ಮನವರಿಕೆ ಮಾಡಿಕೊಡುವರು. ಆತ್ಮಕಲ್ಯಾಣದ ಅವಲೋಕನ ಪ್ರತಿಯೊಬ್ಬರಿಗೂ ಬಂದರೆ ಲೋಕಕಲ್ಯಾಣ ತನ್ನಿಂದ ತಾನೇ ಆಗುವುದು. ಶರಣರ ಆಲೋಚನಾ ಮಟ್ಟಕ್ಕೂ ನಮ್ಮ ಇಂದಿನ ಆಲೋಚನಾ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶರಣರ ಕಾಯಕ ಶ್ರದ್ಧೆ ಸಮಾಜದಲ್ಲಿ ಮೂಡಿ ಬಂದ್ರೆ ಮತ್ತೆ ಕಲ್ಯಾಣ ಸಾರ್ಥಕವಾಗುವುದು. ಸಂಪತ್ತಿನಿಂದ ಸುಖ ಸಾಧ್ಯವಿಲ್ಲ. ಕೋಟಿ ಕೋಟಿ ಸಂಪಾದಿಸುವವರೂ ಆತ್ಮಹತ್ಯೆ ಮಾಡಿಕೊಳ್ಳುವವರು ಯಾಕೆ ಎಂಬುದನ್ನು ಮನಗಾಣಬೇಕು. ನಾಗರಿಕತೆ ಬಂದು ಸಂಸ್ಕೃತಿ ಹೋಗಿದೆ. ಸಂಸ್ಕೃತಿ ಅಂತರಂಗದ ಶಕ್ತಿಯನ್ನು ಹೆಚ್ಚಿಸುವುದು. ದಯೆ. ಕಾಯಕ, ಸತ್ಯ, ಪ್ರಾಮಾಣಿಕತೆ ಮುಂತಾದ ಮೌಲ್ಯಗಳೇ ಸಂಸ್ಕೃತಿ. ಶರಣರ ಮೌಲ್ಯಗಳ ಕುರಿತು ಹೇಳಲಿಲ್ಲ; ನಡೆದರು. ಆತ್ಮಾವಲೋಕನವೇ ಲೋಕಕಲ್ಯಾಣಕ್ಕೆ ನಾಂದಿ. ಸಕಾರಾತ್ಮಕ ಚಿಂತನೆ ನಮ್ಮಲ್ಲಿ ಬರಬೇಕು. ತಾನು ದುಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೆಲವರು ಊಟ ಮಾಡುವಾಗ ಬೆವರು ಸುರಿಸಿದರೆ ಇನ್ನು ಕೆಲವರು ಕೆಲಸ ಮಾಡುವಾಗ ಬೆವರು ಸುರಿಸುವರು. ಕೆಲಸ ಮಾಡುವಾಗ ಬೆವರು ಸುರಿಸುವವರು ನಾವಾಗಬೇಕು. ಚಪ್ಪಲಿ ಹೊಲಿಯುವ ಕೆಲಸ ಶ್ರೇಷ್ಠವಲ್ಲ; ಅಧ್ಯಾಪಕ ವೃತ್ತಿ ಕೀಳಲ್ಲ. ಇಂದು ಆತ್ಮ ಕಲ್ಯಾಣವನ್ನು ಮರೆತು ಲೋಕಕಲ್ಯಾಣದ ಕಡೆ ಯೋಚಿಸುವುದೇ ಅನಾಹುತಗಳಿಗೆ ಕಾರಣ. ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಹೀಗಾಗಿಯೇ ಶರಣರಿಗೆ ಆತ್ಮಬಲ ಬಂದುದು. ಮಕ್ಕಳಿಗೆ ವಚನಗಳನ್ನು ಹೇಳುವ, ಅಳವಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬೇಕು. ಶರಣರ ಛಲ ನಮ್ಮದಾದರೆ ನಾಡು ಸುಂದರವಾಗುವಲ್ಲಿ ಅನುಮಾನವಿಲ್ಲ. ಶರಣರು ಆಡಿದ ಪ್ರತಿಯೊಂದು ಮಾತೂ ಮಂತ್ರ. ಅಂತರಂಗದ ಸಾಕ್ಷಿಪ್ರಜ್ಞೆಯನ್ನು ಸಾಯಿಸಿಕೊಂಡವರಿಗೆ ವಚನಧರ್ಮದ ಅವಶ್ಯಕತೆಯಿದೆ. ಮತ್ತೆ ಕಲ್ಯಾಣ ಕೇವಲ ಶಬ್ದವಲ್ಲ; ಆಚರಣೆ. ಸತ್ಕಾರ್ಯಗಳನ್ನು ಮಾಡುವಾಗ ವಿಜ್ಞಗಳು ಹೆಚ್ಚು. ಅಂಥ ವಿಜ್ಞಗಳನ್ನು ನಾವು ಸ್ವೀಕರಿಸಿಯೇ ಮುಂದುವರಿಯವ ದೃಢ ಸಂಕಲ್ಪ ಮಾಡಿದ್ದೇವೆ ಎಂದರು.
21 ನೆಯ ಶತಮಾನಕ್ಕೆ ಬಸವ ತತ್ವ ಕುರಿತಂತೆ ಮಾತನಾಡಿದ ಧಾರವಾಡದ ಚಿಂತಕ ಡಾ. ರಂಜಾನ್ ದರ್ಗಾ ಮಾತನಾಡಿ ಬಸವ ತತ್ವ ಕುರಿಂತಂತೆ ನಮ್ಮ ಯುವಕರಿಗೆ ಬಸವ ಪರಂಪರೆಯ ಇತಿಹಾಸವನ್ನು ಸರಿಯಾಗಿ ಹೇಳಿಲ್ಲ. ಜಗತ್ತಿನ ಹೊಸ ಧರ್ಮಗಳಲ್ಲಿ ಒಂದು. ಇದು ಪರ್ಯಾಯ ಸಂಸ್ಕೃತಿ, ದರ್ಶವನ್ನು ನೀಡಿದೆ. ಜಾತಿಪ್ರಜ್ಞೆಯು ಬಸವ ಪ್ರಜ್ಞೆಗೆ ವಿರುದ್ಧವಾದುದು. ಮಾನವತೆಯ ಏಕತೆಯ ಬಹುದೊಡ್ಡ ಪರಂಪರೆಯನ್ನು ಬಸವಣ್ಣನವರು ಹೇಳಿದ್ದಾರೆ. ಮನುಷ್ಯ ಜಾತಿ ಒಂದೇ ಸತ್ಯ. ಲಿಂಗೀ ಬ್ರಾಹ್ಮಣರಾಗುವ ಅಪಾಯವನ್ನು ತಪ್ಪಿಸಬೇಕಿದೆ. ಮಕ್ಕಳಿಗೆ ಬಸವ ಚಿಂತನೆಯನ್ನು ತಿಳಿಸದೆ ದೊಡ್ಡ ತಪ್ಪು ಮಾಡಿದ್ದೇವೆ. ವೈಚಾರಿಕತೆಯ ಹಿನ್ನೆಲೆಯಲ್ಲಿ ಐರೋಪ್ಯ ಖಂಡ ಕತ್ತಲೆಯಲ್ಲಿತ್ತು. ನಮ್ಮ ಕಸುಗುಡಿಸುವ ಸತ್ಯಕ್ಕ 12 ನೆಯ ಶತಮಾನದಲ್ಲಿ ವಚನ ಬರೆದ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತ್ಯದ ಒಂದೇ ಒಂದು ಸಾಲೂ ರಚಿತವಾಗಿರಲಿಲ್ಲ. ದುಡಿಯುವ ಜನರ, ಮಹಿಳೆಯರ, ಹಿಂದುಳಿದವರ ಸಾಹಿತ್ಯ ವಚನ ಸಾಹಿತ್ಯ. ಒಂದು ವಚನ ಸಾಮಾಜಿಕ, ಸಾಹಿತ್ಯಕ, ಆರ್ಥಿಕ ಮುಂತಾದ ಬಹುಮುಖವನ್ನು ಆಯಾಮವನ್ನು ಒಂದಿದೆ. ಒಂದು ವಚನ 21 ನೆಯ ಶತಮಾನದ ಸಮಸ್ಯೆಗಳನ್ನು ಹೊಡೆದೋಡಿಸಬಲ್ಲುದು. ಬಸವವಣ್ಣನವರ ಚಿಂತನೆಯ ಕ್ರಮ ಅದ್ಭುತ. ಪ್ರಕೃತಿ ಬಸವಣ್ಣನವರಂಥ ಇನ್ನೊಂದು ಕೂಸನ್ನು ಹಡೆದಿಲ್ಲ. ದುಡಿಯುವ ಜನರ ಮೊದಲ ನಾಯಕ, ಸಂಘಟಕ ಬಸವಣ್ಣ. `ಲಿಂಗವ ಪೂಜಿಸಿ ಫಲವೇನಯ್ಯ? ಸಮರತಿ, ಸಮಕಳೆ, ಸಮಸುಖವ ಅರಿಯದನ್ನಕ್ಕ’ ಎನ್ನುವ ಮೂಲಕ ಪೂಜೆಯಲ್ಲಿ ಫಲವನ್ನು ಕಂಡುಕೊಂಡಿದ್ದಾರೆ. 21 ನೆಯ ಮಹತ್ವದ ಬೀಜ 12 ನೆಯ ಶತಮಾನದ ವಚನ ಚಳುವಳಿಯಲ್ಲಿದೆ. ಏಕದೇವೋಪಾಸನೆಯನ್ನು ಮೊದಲು ಹೇಳಿದವರು ಬಸವಣ್ಣ. ಕಲ್ಯಾಣದಲ್ಲಿ ಕೊಡುವವರುಂಟು; ಬೇಡುವವರಿರಲಿಲ್ಲ. ಮೊದಲ ಆರ್ಥಶಾಸ್ತ್ರಜ್ಞ ಬಸವಣ್ಣ. ಅನುಭಾವ ಅನುಭವವಿಲ್ಲದೆ ಬರುವುದಿಲ್ಲ. ಬಸವ ಧರ್ಮ ಜನರ ಮಧ್ಯೆ ಹುಟ್ಟಿದ್ದು. ಇದು ಸಮೂಹ ನಾಯಕತ್ವದ ಧರ್ಮ. ಬಸವಣ್ಣನ ಪಾರ್ಲಿಮೆಂಟಿನಲ್ಲಿ 770 ಸದಸ್ಯರಿದ್ದರು. ವಚನ ಸಾಹಿತ್ಯ ವಿಶ್ವ ಸಾಹಿತ್ಯ. ಅದು ಆತ್ಮಗೌರವವನ್ನು, ಮಾನವ ಘನತೆಯನ್ನು ಎತ್ತಿಹಿಡಿಯುವ ಸಾಹಿತ್ಯ. ಜಗತ್ತಿನ ಖರ್ಚಿಲ್ಲದ ದೇವರು ಇಷ್ಟಲಿಂಗ. ಸ್ವರ್ಗ-ನರಕಗಳಿಲ್ಲದ ಧರ್ಮ. ಇಡೀ ಜಗತ್ತು ಒಂದು ಜೀವಜಾಲದಲ್ಲಿದೆ ಎಂದವರು. ಬಸವಣ್ಣನ ಧರ್ಮದಲ್ಲಿ ಮನುಷ್ಯನಿಗೆ ದೇವರಗಿಂತ ದೊಡ್ಡಸ್ಥಾನವಿದೆ ಎಂದರು.
`ಆತ್ಮಕಲ್ಯಾಣ-ಲೋಕಕಲ್ಯಾಣ’ ವಿಷಯ ಕುರಿತಂತೆ ಮಾತನಾಡಿದ ಬೆಂಗಳೂರಿನ ಚಿಂತಕಿ ಡಾ. ಬಿ ಟಿ ಲಲಿತಾ ನಾಯಕ್ ಮಾತನಾಡಿ ಆತ್ಮ ಕಲ್ಯಾಣವಿಲ್ಲದೆ ಲೋಕ ಕಲ್ಯಾಣ ಸಾಧ್ಯವಿಲ್ಲ. ಆತ್ಮವಿಲ್ಲದ ಜೀವಿಯಲ್ಲ. ಜೀವಪರವಾದ ನಿಲುವನ್ನು ತಳೆಯಲು ಮತ್ತು ಆ ಸಂದೇಶವನ್ನು ಸಾರಲು 12 ನೆಯ ಶತಮಾನದ ಶರಣರು ಮಾಡಿದ ಪ್ರಯತ್ನ ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತಿದೆ. ಜ್ಞಾನದ ಬೆಳಕು ನೀಡುವ ವ್ಯವಸ್ಥೆ ಶರಣರಲ್ಲಿತ್ತು. ಕೇವಲ ಮೂರ್ನಾಲ್ಕು ಸಾಲುಗಳಲ್ಲಿರುವ ವಚನಗಳು ಜಗತ್ತನ್ನೇ ಬದಲಿಸಬಲ್ಲವು. ಇಂಥ ವಚನಗಳು ಬಂದು ಶತಶತಮಾನಗಳಾದರೂ ಅವನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಇಂದು ನಾವು ಅಕ್ಷರ ವಿದ್ಯೆಯನ್ನು ಮಾತ್ರ ಕಲಿತಿದ್ದೇವೆ. ನಾವು ನಮ್ಮ ನಡವಳಿಕೆಯನ್ನು ಕ್ರಿಯೆಯಲ್ಲಿ ತರುವಲ್ಲಿ ವಿಫಲರಾಗಿದ್ದೇವೆ. ಪಾತಾಳಕ್ಕೆ ಇಳಿದಿರುವ ನಮ್ಮನ್ನು ಮೇಲೆತ್ತಲು ಹೊರಟಿರುವುದೇ ಮತ್ತೆ ಕಲ್ಯಾಣ. ಭ್ರಷ್ಟಾಚಾರ, ಮೌಢ್ಯ, ಸ್ವಾರ್ಥಕ್ಕೆ ಕಾರಣ ನಮ್ಮಲ್ಲಿ ತತ್ವ ಸಿದ್ಧಾಂತ ವಿಲ್ಲದೇ ಇರುವುದೇ ಆಗಿದೆ. ಇಂದು ಕೇವಲ ಹಣದ ಹಿಂದೆ ಮಾತ್ರ ಬಿದ್ದಿರುವುದೇ ಆಗಿದೆ. ದೇವರು ಮತ್ತು ದೆವ್ವಗಳು ಬಡ ಜನರಿಗೆ ಬಹಳ ಸಹಾಯ ಮಾಡುತ್ತವೆ. ಸತ್ಯ, ದಯೆ, ಪ್ರಾಮಾಣಿಕತೆಯೇ ನಿಜ ದೇವರು. ದೇವಸ್ಥಾನಗಳಿಗೆ ಹೋಗಿ ಲಂಚಕೊಟ್ಟು ಪಾಪದ ಕೆಲಸಗಳಿಗೆ ಅನುಮತಿ ಕೇಳುವುದು ಎಷ್ಟು ಸರಿ. ರಾಜಕಾರಣಿಗಳಿಗೆ ಭವಿಷ್ಯಕಾರುರು ಕಂಡ ಕಂಡ ಕಲ್ಲು, ಮಣ್ಣು, ಮರಗಳಿಗೆ ದೀರ್ಘದಂಡ ಹೊಡೆಯುವಂತೆ ಹೇಳಿದರೂ ಗೆಲ್ಲುವವನು ಒಬ್ಬನೇ ಎನ್ನುವ ಸತ್ಯ ನಮ್ಮ ರಾಜಕಾರಣಿಗಳಿಗೆ ತಿಳಿಯದೇ? ದೇವರು ಮತ್ತು ದೆವ್ವಗಳನ್ನು ಬಳಸಿಕೊಂಡು ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎನ್ನುವ ಅರಿವು ನಮಗೆ ಬರಬೇಕೆಂದರೆ ವಚನಗಳನ್ನು ಓದಬೇಕು. ವಚನಕಾರರು ಬೂಟಾಟಿಕೆ ಬರೆದವರಲ್ಲ. `ಕೈದು ಕೊಡಬಹುದಲ್ಲದೆ ಕಲಿತನವ ಕೊಡಬಹುದೇ ಎನ್ನುವ ವಚನ ಎಷ್ಟು ತೀಕ್ಷ್ಣವಾಗಿದೆ ಅನ್ನುವುದನ್ನು ಅರಿಯಬೇಕು. ಇಂಥ ಜ್ಞಾನ, ತಿಳುವಳಿಕೆ ವಚನಗಳಲ್ಲಿದೆ. ಅವುಗಳನ್ನು ನಮ್ಮ ಮಕ್ಕಳಿಗೆ ಹೇಳುವ ಮೂಲಕ ಆತ್ಮ ಕಲ್ಯಾಣ-ಲೋಕಕಲ್ಯಾಣದ ಕಡೆ ಹೆಜ್ಜೆ ಇಡಬೇಕು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ ಕೆ ಗೋವಿಂದರಾವ್ ಮಾತನಾಡಿ ಬಸವಣ್ಣನವರ ಕ್ರಾಂತಿ ಯಶಸ್ವಿಯಾಗಬೇಕಾದರೆ ಕಾರ್ಯಕ್ರಮಗಳಲ್ಲಿ ಸ್ವಾಗತ ಮತ್ತು ವಂದನಾರ್ಪಣೆಗಳನ್ನು ಬಿಡಬೇಕು. ನಮ್ಮ ಅಹಂಕಾರಗಳು ಕೆಲವು ಪ್ರಕಟಿತ ಇನ್ನು ಕೆಲವು ಅಪ್ರಕಟಿತವಾಗಿರುತ್ತವೆ. ಈ ಅಹಂಕಾರವನ್ನು ನಿರಸನ ಮಾಡಿಕೊಳ್ಳುವುದೇ ನಮ್ಮ ಬದುಕಿನ ಆಧ್ಯತೆಯಾಗಬೇಕು. ಬಸವಣ್ಣ, ಅಕ್ಕನ ವಿನಯವಂತಿಕೆ ನಮ್ಮಲ್ಲಿ ಅಳವಡಬೇಕು. ವಚನಗಳಲ್ಲಿ ಮೃದುತ್ವ, ನಯ, ವಿನಯ, ಅಂತಃಶಕ್ತಿಯನ್ನು ಗುರುತಿಸುವ ಮನಸ್ಸು ನಮ್ಮದಾಗಬೇಕು. ಬಸವಣ್ಣನ ದೇವರು `ಅಗಮ್ಯ, ಅಗೋಚರ, ಜಗದಗಲ, ಮುಗಿಲಗಲ, ಪಾತಾಳದಿಂದತ್ತತ್ತ...’ ಈ ವಚನ ಓದುವುದೇ ಅದ್ಭುತವಾದ ಅನುಭವ. ಅಮೂರ್ತಕ್ಕೆ ಮೂರ್ತ ಸ್ವರೂಪ ಕೊಡುವ ಯತ್ನ ಬಹಳ ಹಿಂದಿನಿಂದಲೂ ನಡೆದಿದೆ. `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎನ್ನುವ ಮಾತು ಎಂಥ ಅರ್ಥಗರ್ಭಿತವಾದುದು. ಬಸವಣ್ಣನವರ ದೇವರು ಒಂದು ಮಾರ್ಗವೇ ಹೊರತು ಅಂತಿಮವಲ್ಲ. ಬಸವ ಯುಗ ವಿವೇಕ, ವಿನಯದ ಯುಗ. ಯಾವ ವಚನಗಳಲ್ಲೂ ಅಂತಿಮ ಗುರಿಯನ್ನು ಹೇಳಿಲ್ಲ. ಪ್ರಕೃತಿಗೂ ತೃಪ್ತಿಇಲ್ಲ. ಹೀಗಾಗಿ ಪ್ರತಿಕ್ಷಣವೂ ಪ್ರಕೃತಿ ಹೊಸದನ್ನು ಸೃಷ್ಟಿಸುತ್ತದೆ. ವಚನಗಳನ್ನು ಓದುವುದೇ ನಾವು ಪ್ರಕೃತಿಯ ಹತ್ತಿರಕ್ಕೆ ಹೋಗುವ ಮಾರ್ಗ. ವಚನ ಕಾಲಕ್ಕೆ ಎಂದಿಗೂ ನಾವು ಕೃತಜ್ಞರಾಗಿರಬೇಕು. ಹೃದಯಕ್ಕೆ ಮುಟ್ಟಿ ಅಲ್ಲಿ ಅರಳಲು ಸಾಧ್ಯವಾಗುವುದು ವಚನಗಳಿಂದ ಮಾತ್ರ. 12 ನೆಯ ಶತಮಾನ ಜಗತ್ತಿನಲ್ಲಿಯೇ ಅದ್ಭುತವಾದ ಯುಗ. ಆ ಯುಗವನ್ನು ನಾವು ಮತ್ತೆ ಮತ್ತೆ ಪಾಲಿಸುವುದೇ ಇಂದಿನ ಅತ್ಯಗತ್ಯ ಎಂದರು.
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆ ಹಾಡಿದರು. ಶರಣ ಮಹದೇವಪ್ಪ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ ಎಸ್ ಜಿ ಶಿವಶಂಕರ ಕರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಸಾಮರಸ್ಯ ಭೋಜನ ಏರ್ಪಡಿಸಲಾಗಿತ್ತು.
ಸಾಮರಸ್ಯ ನಡಿಗೆ ಮಳೆಯ ನಡುವೆಯೂ ಗನ್ ಹೌಸ್ ಬಳಿ ಇರುವ ಬಸವ ಪುತ್ತಳಿಯಿಂದ ಆರಂಭವಾಗಿ ಅಂಬೇಡ್ಕರ್ ಪ್ರತಿ ಬಳಿ ಮುಕ್ತಾಯಗೊಂಡಿತು. ಬಸವಾದಿ ಶಿವಶರಣರ ಸ್ಥಬ್ಧ ಚಿತ್ರದೊಂದಿಗೆ ವಿವಿಧ ಧಾರ್ಮಿಕ ನೇತಾರರು, ಜನಪ್ರತಿನಿಧಿಗಳು, ಕಲಾ ತಂಡಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಮೈಸೂರು, ಆಗಸ್ಟ್ 06; ಮತ್ತೆ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಾವು ಮಾತನಾಡಿದ ಮಾತುಗಳನ್ನು ಮಾಧ್ಯಮದವರು ಯಥಾವತ್ತಾಗಿ ಪ್ರಕಟಿಸದೇ ಇದ್ದಾಗ ಅನೇಕರಲ್ಲಿ ಸಂಶಯಗಳು ಹುಟ್ಟುವುದು ಸಹಜ. ಮೀಸಲಾತಿ ಕುರಿತಂತೆ ನಮ್ಮ ನಿಲುವು; ಎಲ್ಲಿಯವರೆಗೆ ಈ ಸಮಾಜದಲ್ಲಿ ಅಸಮಾನತೆಗಳು ಇವೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎನ್ನುವುದು. `ಮತ್ತೆ ಕಲ್ಯಾಣ’ದ ಉದ್ದೇಶ 12ನೆಯ ಶತಮಾನದಲ್ಲಿ ವಚನಕಾರರು ಬಿತ್ತಿದ ಬೀಜವನ್ನು ಮತ್ತೆ ಬೆಳೆಯುವುದಾಗಿದೆ. ಕಟ್ಟಡಗಳನ್ನು ಕಟ್ಟುವುದು ಸುಲಭ. ಮನಸ್ಸುಗಳನ್ನು ಕಟ್ಟುವುದು ಕಷ್ಟ. ಇಂದು ಬೆಂಕಿ ಇಡುವವವರೇ ಹೆಚ್ಚು; ಬೆಳಕು ನೀಡುವವರು ಬಹಳ ಕಡಿಮೆ. ಒಳ್ಳೆಯ ಕಾರ್ಯ ಮಾಡುವವರನ್ನು ಪ್ರೋತ್ಸಾಹಿಸಬೇಕಾಗಿದೆ. ಮೀಸಲಾತಿಯ ಬಗೆಗಿನ ನಮ್ಮ ನಿಲುವನ್ನು ಕೇಳುವವರು ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧ ಹರಿಜನವರು ಎನ್ನುವುದನ್ನು ತಿಳಿದಿರಿಲಿ. ನಮ್ಮ ಮಠ ಯಾವುದೇ ಜಾತಿಗೆ ಸೀಮಿತವಲ್ಲ. ನಮ್ಮ ಮಠದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಸಹಪಂಕ್ತಿ ಊಟದ ವ್ಯವಸ್ಥೆ ಇತ್ತು. ಆಗ ಸಮಾಜದವರು ಪ್ರಶ್ನಿಸಿದಾಗ ಶಿವಕುಮಾರ ಶ್ರೀಗಳು ಹೇಳಿದ್ದು; ನಾವು ಪೀಠವನ್ನು ಬೇಕಾದರೂ ತ್ಯಜಿಸುವೆವು, ಆದರೆ ನಮ್ಮ ಆದರ್ಶಗಳನ್ನಲ್ಲ ಎಂದು. ಮಕ್ಕಳು ಈ ದೇಶವನ್ನು ಕಟ್ಟುವಂಥವರು. ಮಕ್ಕಳು ಖಾಲಿ ಚೀಲವಿದ್ದಂತೆ. ಖಾಲಿ ಚೀಲದಲ್ಲಿ ಏನು ತುಂಬಬೇಕು ಎನ್ನುವ ಅರಿವು ತುಂಬುವ ವ್ಯಕ್ತಿಗೆ ಇರಬೇಕು. ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ, ನೈತಿಕ, ಪಾರಮಾರ್ಥಿಕ ಶಿಕ್ಷಣನೀಡಬೇಕು. ಅರಿವು ಬೇರೆ ಬುದ್ಧಿ ಬೇರೆ. ಅರಿವನ್ನು ಹೆಚ್ಚಿಸುವ ಶಿಕ್ಷಣ ಬೇಕು. ಎಲೆಕ್ಟ್ರಾನಿಕ್ ಮಾಧ್ಯಮಗಳು ಜನರನ್ನು ದಿಕ್ಕುತಪ್ಪಿಸುತ್ತವೆ. ವಿದ್ಯರ್ಥಿಗಳು ವಿಚಾರವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ನಡೆ-ನುಡಿಯಲ್ಲಿ ಸಾಮ್ಯತೆಯಿರಬೇಕು. ಕಾಯಕ ಶ್ರದ್ಧೆ ಅತೀ ಮುಖ್ಯ. ಕಾಯಕ ಅಂದ್ರೆ ಸತ್ಯ ಶುದ್ಧವಾದ ಕೆಲಸ. ತನ್ನ ಅನ್ನವನ್ನು ಇನ್ನೊಂದು ಜೀವಿಗೆ ತೊಂದರೆಯಾಗದಂತೆ ಹೇಗೆ ಪಡೆದುಕೊಳ್ಳಬೇಕು ಎನ್ನುವ ಅರಿವು ಇರಬೇಕು.
ಸಂವಾದಕರಾದ ಹೆಚ್ ಜನಾರ್ಧನ್ ಮಾತನಾಡಿ 800 ವರ್ಷಗಳ ಹಿಂದೆ ಬರೆದ ವಚನಗಳು ನಮಗೆ ಎಲ್ಲಾ ರೀತಿಯ ಬದುಕಿಗೆ ಅನಿವಾರ್ಯವಾಗಿದೆ. ಇಂದಿನ ಸಮಾಜ ಬಹುತೇಕ ಭ್ರಮೆ ಮತ್ತು ಸುಳ್ಳುಗಳಲ್ಲಿಯೇ ಜೀವಿಸುತ್ತಿದೆ. ಸುಳ್ಳು ಹೇಳಿ ನಿರ್ಮಲವಾಗಿ, ನೆಮ್ಮದಿಯಾಗಿ ಬಹಳ ದಿನ ಬದುಕುವುದಕ್ಕೆ ಆಗುವುದಿಲ್ಲ. ಅಜ್ಞಾನವೆಂಬ ತೊಟ್ಟಿಲು, ಜ್ಞಾನವೆಂಬ ಶಿಶುವನ್ನು ಮಲಗಿಸಿ ನೇಣು ಎನ್ನುವ ಹಗ್ಗಕಟ್ಟಿ ತೂಗ್ತಾ ಇದ್ದಾಳೆ ಭ್ರಮೆಯೆನ್ನುವ ತಾಯಿ ಎಂದು ಅಲ್ಲಮಪ್ರಭುಗಳು ಹೇಳುವರು. ಮಾನವನ ಆರೋಗ್ಯಕರ ಬದುಕಿಗೆ ವಚನಸಾಹಿತ್ಯ ಪೂರಕವಾಗಿ ನಿಲ್ಲುವುದು. ಹಾಗಾಗಿಯೇ ನಾವು ಇಂದು ವಚನಗಳತ್ತ ಮುಖ ಮಾಡಬೇಕಾಗಿದೆ ಎಂದರು.
ಸಂವಾದಕ ಪ್ರೊ ಮೊರಬದ ಮಲ್ಲಿಕಾರ್ಜುನ ಮಾತನಾಡಿ ಆರಂಭದಲ್ಲಿ ದೊಡ್ಡ ಸಮುದ್ರ ಸಣ್ಣ ಸಣ್ಣ ಝರಿಗಳಾಗಿಯೇ ಹರಿಯುತ್ತವೆ. ಹಾಗೆಯೇ ಈ ಮತ್ತೆ ಕಲ್ಯಾಣ ಮುಂದೊಂದು ದಿನ ವಿಶಾಲ ಹರವನ್ನು ಹೊಂದುವುದರಲ್ಲಿ ಯಾವ ಅನುಮಾನವೂ ಇಲ್ಲ. ಮಕ್ಕಳಲ್ಲಿ ವಚನಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿ ನಿಲ್ಲವವು. ಪರಸ್ಪರ ಸಂವಾದ, ಪ್ರಶ್ನೋತ್ತರ, ವಿವೇಕದ ಮೂಲಕ ವಿಚಾರಗಳನ್ನು ಹಂಚಿಕೊಳ್ಳಬೇಕು. ಶರಣರು ದೇವರಿಗೇ ಪ್ರಶ್ನೆ ಮಾಡುವಷ್ಟು ವಿವೇಕವನ್ನು ರೂಢಿಸಿಕೊಂಡಿದ್ದರು. ಅವರ ವಿವೇಕ ಇಂದು ನಮ್ಮದಾಗಬೇಕು.
ಸಂವಾದದಲ್ಲಿ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗಳು
• ತಂದೆ ಉನ್ನತ ಹುದ್ದೆಯಲ್ಲಿದ್ದು ಅವರ ಮಕ್ಕಳು ಕಡಿಮೆ ಅಂಕಗಳಿಸಿದರೂ ಅವರಿಗೆ ಮೀಸಲಾತಿಯ ಆಧಾರದ ಮೇಲೆ ಹುದ್ದೆಯನ್ನು ಕೊಡಿಸುವುದು ಸರಿಯೇ?
• ಮತ್ತೆ ಕಲ್ಯಾಣ ಕಾರ್ಯಕ್ರಮದ ಉದ್ದೇಶವೇನು? ಈ ಕಾರ್ಯಕ್ರಮ ಮುಗಿದ ಮೇಲೆ ಮುಂದಿನ ಕಾರ್ಯತಂತ್ರವೇನು?
• ಜಾತಿ ಆಧಾರದ ಹಲೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸಿಕೊಳ್ಳುತ್ತಾರೆ. ಇದಕ್ಕೆ ತಮ್ಮ ಅಭಿಪ್ರಾಯವೇನು?
• ವಚನಗಳನ್ನು ಹೇಳುವುದರ ಮೂಲಕ ಜನಗಳನ್ನು ಹೇಗೆ ಬದಲಾವಣೆ ಮಾಡುತ್ತೀರಿ?
• ಮೇಲ್ಜಾತಿಯವರು ಕೆಳಜಾತಿಯವರ ಮಧ್ಯೆ ಜಗಳವಾದಾಗ ಮೇಲ್ಜಾತಿಯವರದೇ ತಪ್ಪಿದ್ದರೂ ಕೆಳಜಾತಿಯವರನ್ನು ಕಾನೂನಾತ್ಮಕವಾಗಿ ಶಿಕ್ಷಿಸುತ್ತಾರೆ. ಇದು ಸರಿಯೇ?
• ಕರ್ನಾಟಕಲ್ಲಿ ಅನೇಕ ಮಠಗಳು ಸ್ಥಾಪನೆಯಾಗಿವೆ. ಆ ಎಲ್ಲಾ ಮಠಗಳು ಬಸವಣ್ಣನವರ ತತ್ವಗಳನ್ನು ಅನುಸರಿಸುತ್ತಿವೆಯೇ?
• ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಜಾತಿಯನ್ನು ಹೇಗೆ ನಿವಾರಣೆ ಮಾಡುತ್ತೀರಿ?
• ಜಾತಿಮುಕ್ತ ಸಮಾಜವನ್ನು ಕಟ್ಟಲಿಕ್ಕೆ ವಿದ್ಯಾರ್ಥಿಗಳು ಏನು ಮಾಡಬೇಕು?
• 12ನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಶೂನ್ಯಪೀಠದ ಬಗ್ಗೆ ಹೇಳುವಿರಾ?
- ಹೆಚ್ ಎಸ್ ದ್ಯಾಮೇಶ್

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)