ಆಗಸ್ಟ್ 05 ಸೋಮವಾರ, ಕೊಡಗು
ಕೊಡಗಿನಲ್ಲಿ 5ನೇ ದಿನದ ಮತ್ತೆ ಕಲ್ಯಾಣ ಆಂದೋಲನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ
ಇಲ್ಲಿನ ಕಾವೇರಿಹಾಲ್ನಲ್ಲಿ `ಮತ್ತೆ ಕಲ್ಯಾಣದ’ ಭಾಗವಾಗಿ ಆಯೋಜಿಸಲಾಗಿದ್ದ `ಸಾರ್ವಜನಿಕ ಸಮಾವೇಶ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಕ್ಕಳನ್ನು ದೇವರೆಂದು ಭಾವಿಸಿದರೆ ದೆವ್ವದ ಕೆಲಸ ನಡೆಯುವುದಿಲ್ಲ. ಮಾನವ ದೇವನಾಗಬೇಕು. ಶರಣರ ನುಡಿಮುತ್ತುಗಳು ಸದಾ ನಮ್ಮ ಕಿವಿಯಮೇಲೆ ಬೀಳುತ್ತಿದ್ದರೆ ಸದ್ಗುಣಗಳು ತಾನಾಗಿಯೇ ರೂಢಿಗತವಾಗುತ್ತದೆ. ಇಂಥ ಹಂಬಲ ಇಲ್ಲಿ ಕುಳಿತಿರುವ ಮಕ್ಕಳಲ್ಲಿ ಕಾಣುತ್ತಿದ್ದೇವೆ. ಮತ್ತೆ ಕಲ್ಯಾಣದ ಮುಂದುವರೆಕೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಮಕ್ಕಳ ಜೊತೆ ವ್ಯಾಪಕವಾಗಿ ಸಂವಾದ ಮಾಡುವ ಆಶಯವನ್ನು ಹೊಂದಿದ್ದೇವೆ. ಸಾಣೇಹಳ್ಳಿಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ಆಯೋಜಿಸಲಾಗುವುದು. ಆ ಅವಕಾಶವನ್ನು ಮಕ್ಕಳು ಬಳಸಿಕೊಳ್ಳಬೇಕು. ಈ ಸಹಮತ ವೇದಿಕೆಯಲ್ಲಿ ಸ್ವಾಮಿಗಳು, ಅನ್ಯ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಭಾಗವಹಿಸಿದ್ದರೂ ಅವರು ಮಾತನಾಡದೆ ಇಲ್ಲಿನ ಚಿಂತಕರ ಮಾತನ್ನು ಕೇಳುವುದರ ಮೂಲಕ ದೊಡ್ಡತನ ತೋರುತ್ತಿದ್ದಾರೆ. ಇಂಥ ಕೇಳುವ ಮನೋಭಾವ ಎಲ್ಲರಿಗೂ ಬರಬೇಕು ಎಂದರು.
`ವಚನ ಚಳುವಳಿಯ ವೈಶಿಷ್ಟ್ಯ’ ಕುರಿತಂತೆ ಬೆಂಗಳೂರಿನ ಜಿ ಎನ್ ನಾಗರಾಜ್ ಮಾತನಾಡಿ ಮತ್ತೆ ಕಲ್ಯಾಣ ದೇಶಕ್ಕೆ ಮಹತ್ವದ್ದು. ಜಾತಿ ವ್ಯವಸ್ಥೆಯ ಅಸಮಾನತೆಯನ್ನು ತೊಡೆದು ಹಾಕುವ ಉದ್ದೇಶದ ಆಶಯ. ವಚನಕಾರರು ಕುಲವನ್ನು ಅರಸಿದವರಲ್ಲ. ವೈಚಾರಿಕ ಹಿನ್ನೆಲೆಯುಳ್ಳದ್ದು ವಚನ ಚಳುವಳಿ. ಒಂದೇ ಕಾಲಘಟ್ಟದಲ್ಲಿ 30ಕ್ಕಿಂತ ಹೆಚ್ಚು ಮಹಿಳೆಯರು ವೈಚಾರಿಕ ಸಂವಾದಕ್ಕೆ ಇಳಿದದ್ದನ್ನು ಪ್ರಪಂಚಲ್ಲಿ ಬೇರೆ ಎಲ್ಲೂ ನೋಡಲು ಸಾಧ್ಯವಿಲ್ಲ. ಜಾತಿ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಅನೇಕ ಪರಿಣಾಮಕಾರಿ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ದೇವಾಲಯವನ್ನು ನಿರಾಕರಿಸಿದ ಯಾವ ಧರ್ಮವೂ ಜಗತ್ತಿನಲ್ಲಿ ಇಲ್ಲ; ಇದ್ದರೆ ಅದು ವಚನ ಧರ್ಮ ಮಾತ್ರ. ವಚನಕಾರರು ದೇಹಾಲಯದ ಕಲ್ಪನೆಯನ್ನು ಕಟ್ಟಿಕೊಟ್ಟರು. ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಅವಕಾಶ ನೀಡಿದರು. ಕಾಯಕವೇ ತೀರ್ಥಕ್ಷೇತ್ರ ಎಂದು ಮನಗಾಣಿಸಿದರು. ಮಹಿಳಾ ಅಸಮಾನತೆಯನ್ನು ತೊಲಗಿಸದೆ ಜಾತಿಯ ಅಸಮಾನತೆ ಹೋಗಲು ಸಾಧ್ಯವಿಲ್ಲ. ಜಾತಿ ನಿರ್ಮೂಲನೆಗೆ ಪ್ರಯತ್ನ ಮಾಡಿದ ಕಾರಣಕ್ಕೆ ಅಂದು ಪ್ರಭುತ್ವ ಕಲ್ಯಾಣ ರಾಜ್ಯವನ್ನು ನರಕ ಮಾಡಿದರು. ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಹೇಳುತ್ತದೆ. ಆದರೆ ರಾಜಕೀಯ ವಿಕೃತಿಗಳು ಇದನ್ನು ಸಾಕಾರಗೊಳಿಸಲು ಬಿಡುತ್ತಿಲ್ಲ. ಕಾಯ ಮತ್ತು ಕಾಯಕದ ನಡುವಿನ ತತ್ವವನ್ನೇ ವಚನಕಾರರು ತಮ್ಮ ವಚನಗಳಲ್ಲಿ ನುಡಿದದ್ದಲ್ಲದೆ, ನಡೆದು ತೋರಿದರು. ತಾವು ಮಾಡುವ ಕಾಯಕವನ್ನೇ ಆಧಾರವಾಗಿ ಇಟ್ಟುಕೊಂಡು ಬಿಡಿಬಿಡಿಯಾಗಿ ವರ್ಣಿಸಿದ್ದಾರೆ. ಇಂಥ ವರ್ಣನೆ ಆಧ್ಯಾತ್ಮಿಕ ಸಂಗತಿಯ ಜೊತೆ ಬೆಸೆದಿದ್ದಾರೆ. ಜಗತ್ತಿನಲ್ಲಿ ಇಂಥ ವೈಚಾರಿಕ ನಡೆ-ನುಡಿ ಎಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.
`ಇಂದಿನ ಅಗತ್ಯ – ಬಸವ ತತ್ವ’ ಕುರಿತಂತೆ ಬೆಂಗಳೂರಿನ ಡಾ, ಕೆ ಷರೀಪಾ ಮಾತನಾಡಿ ವಚನ ಚಳುವಳಿಯನ್ನು ಕಟ್ಟಿದವರು ಸೂಫಿಗಳು ಮತ್ತು ಸಂತರು. 900 ವರ್ಷಗಳಾದರೂ ಅವರ ಆಶಯ ಈಡೇರಿಲ್ಲ. ಮೌಢ್ಯಗಳು ಇನ್ನೂ ವಿಜೃಂಭಿಸುತ್ತಿವೆ. `ಮತ್ತೆ ಕಲ್ಯಾಣ’ ಇದೊಂದು ಸಾತ್ವಿಕ ಹೋರಾಟ. ಬಂಡವಾಳವೇ ಮಾತನಾಡುತ್ತಿರುವ ಕಾಲದಲ್ಲಿ ನಾವು ಕುಳಿತ್ತಿದ್ದೇವೆ. ಜಾಗತಿಕ ಯುದ್ಧದ ಕರಿಮೋಡ ಕವಿದ ವಾತಾವರಣದಲ್ಲಿ ಇದೊಂದು ಆಶಾದಯಕ ಸಂಗತಿ. ಮನುಷ್ಯತ್ವದ ಸ್ಥಾನದಲ್ಲಿ ಮನುವನ್ನು ಪ್ರತಿಷ್ಠಾಪಿಸುವ ಕೆಲಸ ಸಲ್ಲ. ದಲಿತರನ್ನು, ಮಹಿಳೆಯರನ್ನು, ಮುಸ್ಲಿಮರನ್ನು ಅಪರಾಧಿಗಳಂತೆ ಕಾಣಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಮರುಸ್ಥಾಪನೆ ಮಾಡುವುದು ಇಂದಿನ ತುರ್ತು ಅಗತ್ಯ. ಕೊಂಡಿಮಂಚಣ್ಣನ ವ್ಯಕ್ತಿತ್ವದಂತವರು ಎಲ್ಲ ಸಮಾಜದಲ್ಲಿಯೂ ಇದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಬೇಕು. ಜಲವೊಂದೇ ಶೌಚಾಚ ಮನಕ್ಕೆ ಎನ್ನುವ ಮೂಲಕ ಜಾತಿ, ಲಿಂಗ ಸಮಾನತೆಯನ್ನು ಎತ್ತಿಹಿಡಿದರು. ಕೋರ್ಟಗಳ ಆದೇಶಗಳನ್ನೂ ಉಲ್ಲಂಘಿಸುವ ಪಟ್ಟಭದ್ರ ಹಿತಾಸಕ್ತರು ನಮ್ಮ ಮುಂದೆ ಇದ್ದಾರೆ. ಸಮೂಹಸನ್ನಿಗೆ ವಿವೇಕ ಇರುವುದಿಲ್ಲ. ಯುವಕರು ಇಂಥವಕ್ಕೆ ಬಲಿಯಾಗಬಾರದು. ಮತ್ತೆ ಕಲ್ಯಾಣ ಚಳುವಳಿಯಲ್ಲಿ `ಷರಿಪಾ’ ಕೂಡ ಇದ್ದಾಳೆ ಎನ್ನುವ ಸಂದೇಶ ಎಲ್ಲ ಕಡೆ ಪಸರಿಸಲಿ. ಸಮಾಜವನ್ನು ಕಟ್ಟುವ, ಸೌಹಾರ್ಧತೆಯನ್ನು ಬೆಳೆಸುವ ಈ ಕೆಲಸ ಅತ್ಯಂತ ತುರ್ತಿನ ಸಂಗತಿ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆ ಎಸ್ ದೇವಯ್ಯ ಮಾತನಾಡಿ ಇದೊಂದು ದೊಡ್ಡ ಅದ್ಭುತ ಕಾರ್ಯ. ಮಕ್ಕಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡಿದ್ದು ಇನ್ನೊಂದು ಮಹತ್ಕಾರ್ಯ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ಶರಣರ ವಿಚಾರ ತಿಳಿದುಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ರಾಜಕೀಯೇತರವಾಗಿ ಆಡಳಿತ ನಡೆಯಬೇಕು. ಮತದಾರರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ನೋಡಬಾರದು. ಇಂಥ ವೇದಿಕೆ ಮುಂದುವರಿಯಬೇಕು. ಇಂಥ ಕೆಲಸಗಳಿಗೆ ನಮ್ಮ ಸಹಕಾರ, ಸಹಾಯ ಸದಾ ಇರುತ್ತದೆ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಅಗಸ್ಟ್ 5, ಕೊಡಗು; ಇಲ್ಲಿನ ಕಾವೇರಿಹಾಲ್ನಲ್ಲಿ `ಮತ್ತೆ ಕಲ್ಯಾಣದ’ ಭಾಗವಾಗಿ ಆಯೋಜಿಸಲಾಗಿದ್ದ `ವಿದ್ಯಾರ್ಥಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೇವರು ನಮಗೆ ಕರುಣಿಸಿರುವ ಬಹೊದೊಡ್ಡ ವರ ಮಾತು ಮತ್ತು ವಿವೇಕ. ಮಾತುಗಳನ್ನು ಆಡಿದಂತೆ ನಡೆಯಬೇಕು. ಮಾತು ಮತ್ತು ಕೃತಿಯ ಮಧ್ಯೆ ಹೊಂದಾಣಿಕೆಯಿಲ್ಲದೆ ಇರುವುದರಿಂದ ಸಮಸ್ಯೆಗಳು ಸಾಲು ಸಾಲಾಗಿ ಸೃಷ್ಟಿಯಾಗುತ್ತಿವೆ. ದೇವರಿಗೇ ಸವಾಲು ಹಾಕುವ ನೈತಿಕ ಸ್ಥೈರ್ಯ ಶರಣರಿಗಿತ್ತು. ಬಸವಣ್ಣ ನನ್ನ ನಡೆ ಮತ್ತು ನುಡಿಯಲ್ಲಿ ಒಂದು ಕೂದಲಿನಷ್ಟು ವ್ಯತ್ಯಾಸವಾದರೂ ನೀನೆದ್ದಿ ಹೋಗು ಎನ್ನುವ ನೈತಿಕ ಸ್ಥೈರ್ಯವನ್ನು ತೋರುವರು. ಇಂದು ಜಾತಿ ವಿಜೃಂಭಿಸುತ್ತಿದೆ. ಇವನಾರವ, ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನುವಂತಾದರೆ ಬದುಕು ಸಹ್ಯವಾಗುತ್ತದೆ. ಬಾಂಧವ್ಯಗಳು ಕೃತಕವಾಗದೆ ಪ್ರೀತಿಯಿಂದ ಕೂಡಿರಬೇಕು. ಏನೇನೋ ಕಾರಣಕ್ಕೆ ಸಮಸ್ಯೆಗಳು ಸೃಷ್ಟಿಯಾಗುವವು. ಅವುಗಳನ್ನು ತಾಳ್ಮೆ, ವಿವೇಕದಿಂದ ಬಗೆಹರಿಸಿಕೊಳ್ಳಬೇಕು. ಬಹಿರ್ಮುಖ ಆಲೋಚನೆಗಿಂತ; ಅಂತರ್ಮುಖ ಆಲೋಚನೆಗಳಿಗೆ ಮುಖ ಮಾಡಬೇಕು. ಮಾನವ ದುರಾಸೆಯಿಂದ ಸರ್ವನಾಶವಾಗುವ ಸಾಧ್ಯತೆಯಿದೆ. ಹಣದಿಂದ ಎಂದಿಗೂ ನೆಮ್ಮದಿ, ಶಾಂತಿ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೊಳಿಗೆ ಮಾರಯ್ಯನವರು ಹೇಳಿದ ಆನೆ, ಕುದುರೆ, ಬಂಡಿ, ಬಂಡಾರವಿರ್ದಡೇನು… ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜ, ಸಾವಿಂಗೆ ಸಂಗಡವಾರೂ ಇಲ್ಲ’ ಎಂದು ಹೇಳಿದುದು ಬಹು ಮಾರ್ಮಿಕವಾಗಿದೆ. ಸಂಪತ್ತಿನ ಹಿಂದೆ ಓಡುವುದನ್ನು ನಿಲ್ಲಿಸಬೇಕು. ಸತ್ಯಶುದ್ಧ ಕಾಯಕದ ಮೂಲಕ ಬಂದುದು ಮಾತ್ರ ಸಂಪಾದನೆ. ಅದನ್ನು ತಾನೊಬ್ಬನೇ ಬಳಸಿಕೊಳ್ಳದೆ ದಾಸೋಹ ಮಾಡಬೇಕು. ಇಂಥ ವಿಷಯಗಳು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಕಲ್ಯಾಣದ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಸಂವಾದ ಏರ್ಪಡಿಸಿರುವುದು ಎಂದರು.
ಡಾ ಪ್ರಕಾಶ್ ಕೂಡಿಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡುತ್ತ ಕಾಯಕಕ್ಕೆ ದೈವತ್ವದ ಮಹತ್ವ ನೀಡಿದರು. ಮತ್ತೆ ಕಲ್ಯಾಣವಲ್ಲ; ಮತ್ತೆ, ಮತ್ತೆ ಕಲ್ಯಾಣವಾಗಬೇಕು ಎಂದರು.
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು
ಜಾತಿ-ಮತಗಳು ದೂರವಾಗುವುದು ಕನಸಾ?
12 ನೆಯ ಶತಮಾನದಲ್ಲಿಯೇ ಲಿಂಗ ಸಮಾನತೆಯ ಕೊರತೆಯನ್ನು ನೀಗುವ ಪ್ರಯತ್ನ ನಡೆದಿತ್ತು. ಆದರೆ ಇದುವರೆಗೂ ಅದು ಸಾಧ್ಯವಿಲ್ಲ ಯಾಕೆ?
ಹೆಂಡತಿ ವಿದೇಶಕ್ಕೆ ಹೋಗುವಾಗ ಗಂಡನ ಅನುಮತಿ ಪತ್ರಬೇಕು. ಸರಿನಾ?
ರಾಜಕೀಯವೆಂಬ ಅರಾಜಕತೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕಲ್ಯಾಣ ಯಶಸ್ವಿಯಾಗುತ್ತಾ?
ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಮೀಸಲಿಡುವುದು ಎಷ್ಟು ಸರಿ?
ಲಿಂಗಾಯತ ಮತ್ತು ಹಿಂದೂ ಧರ್ಮಎರಡೂ ಒಂದೇ ಅಥವ ಬೇರೆ ಬೇರೆಯೇ?
ಮೀಸಲಾತಿ ಯಾಕೆ ಬೇಕು?
ಜಪ-ತಪಗಳು ಶಿವನನ್ನು ಒಲಿಸಿಕೊಳ್ಳುವ ದಾರಿ ಎನ್ನುತ್ತಾರೆ. ಇದು ನಿಜವೇ?
ವೇದ, ಪುರಾಣ, ಶಾಸ್ತ್ರಗಳನ್ನು ಸಂಪೂರ್ಣವಾಗಿ ಯಾಕೆ ವಚನಕಾರರು ತಿರಸ್ಕರಿಸಿದ್ದಾರೆ.
ಸತ್ಯಕ್ಕೆ ಹೆಚ್ಚು ಮಹತ್ವವನ್ನು ಶರಣರು ನೀಡಿದ್ದರು.ಆದರೆ ಇಂದಿನ ಜನರು ಸುಳ್ಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಯಾಕೆ?
ಧರ್ಮಾತೀತವಾದ ಮಠಗಳು ಯಾವುದೋ ಒಂದು ಧರ್ಮದ ಪರವಾಗಿ ಯಾಕೆ ಕೆಲಸ ಮಾಡುತ್ತಿವೆ?
ಧರ್ಮ ಯಾಕೆ ಬೇಕು? ಬೇಕಾದರೆ ಎಂಥ ಧರ್ಮ ಬೇಕು?
ಆಚಾರ-ವಿಚಾರಗಳಿಗೆ ಧರ್ಮದ ಹೆಸರನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?
ಶಾಲೆಯಲ್ಲಿ ಎಲ್ಲರೂ ಸಮಾನರು ಅಂತಾರೆ ವಿದ್ಯಾರ್ಥಿ ವೇತನ ನೀಡುವಾಗ ಯಾಕೆ ತಾರತಮ್ಯ ಮಾಡುತ್ತಾರೆ?
12 ಮತ್ತು 21 ಶತಮಾನದ ನಡುವೆ ವಚನ ಚಳುವಳಿ ಯಾಕೆ ನಿರಂತರತೆಯನ್ನು ಕಾಯ್ದುಕೊಳ್ಳಲಿಲ್ಲ?
ಬಸವಣ್ಣನವರ ಅನುಭವ ಮಂಟಪ ಪ್ರಜಾಪ್ರಭುತ್ವದ ಮೂಲ ಎಂದು ಹೇಳುತ್ತಾರೆ. ಹೇಗೆ?
ಬಸವಣ್ಣನವರ ಪ್ರಕಾರ ದಾಸೋಹದ ಅರ್ಥವೇನು?
ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆ ಹಾಡಿದರು. ಕೊಡಗಿನ ಅಕ್ಕನಬಳಗದ ಸದಸ್ಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಟಿ ಪಿ ರಮೇಶ್ ಸ್ವಾಗತಿಸಿದರು. ಮುನೀರ್ ಅಹಮದ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯ ಮೇಲೆ ಕೆ ಎಸ್ ದೇವಯ್ಯ, ಶಾಸಕ ಎಂ ಪಿ ಅಪ್ಪಚ್ಚು ರಂಜನ್, ಶ್ರೀ ಸದಾಶಿವ ಸ್ವಾಮಿಗಳು, ಮಹಮ್ಮದ್ ರಫಿ, ಮೌಲಾನ ಅಬ್ದುಲ್ ಹಕೀಮ್, ಶ್ರೀ ಮಹಂತ ಸ್ವಾಮಿಗಳು, ರೆವೆರೆಂಡ್ ಫಾದರ್, ಜೋಸೆಫ್, ಪ್ರಕಾಶ್ ಕೂಡಿಗೆ, ಶಿವಪ್ಪ, ಯಾಕೂಬ್, ಬೇಬಿ ಮ್ಯಾಥ್ಯೂವ್, ಜಿ ಎನ್ ನಾಗರಾಜ್, ಕೆ ಷರೀಪಾ ಮುಂತಾದವರು ಉಪಸ್ಥಿತರಿದ್ದರು.
ಬೆಳಗ್ಗೆ 10.30 ರಿಂದ ಸಮಾರಸ್ಯ ನಡಿಗೆಯು ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯದ ಬಳಿಯಿಂದ ಆರಂಭವಾಗಿ ಕಾವೇರಿ ಹಾಲ್ ಬಂದು ತಲುಪಿತು. ಸ್ಥಬ್ಧಚಿತ್ರಗೊಂದಿಗೆ ವಿವಿಧ ಧರ್ಮದ ಗುರುಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಹೆಚ್ ಎಸ್ ದ್ಯಾಮೇಶ್

.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)
.jpeg)