ಆಗಸ್ಟ್ 04 ಭಾನುವಾರ, ಹಾಸನ


ಹಾಸನದಲ್ಲಿ ಮತ್ತೆ ಕಲ್ಯಾಣ ಆಂದೋಲನ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲು - ಕ್ಲಿಕ್ ಮಾಡಿ



ಹಾಸನ, ಆಗಸ್ಟ್ 4; ಇಲ್ಲಿನ ಹಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಮಾವೇಶದ ಸಾನ್ನಿಧ್ಯವಹಿಸಿದ್ದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜ ನಿಂತ ನೀರಿನಂತಾಗಿದೆ. ಆ ನೀರು ಕೊಳೆತು, ಮಲೆತು, ರೋಗರುಜಿನಗಳು ಹರಡಿ ನರಳುವಂತಾಗಿದೆ. ಬಾಹ್ಯವಾಗಿ ನಾವು ಸುಂದರವಾಗಿ ಕಂಡರೂ ಒಳಗೆ ಕೊಳೆತು ನಾರುತ್ತಿದ್ದೇವೆ. ಬದ್ಧತೆಯಿಲ್ಲದೆ ದ್ವಂದ್ವ ಮನೋಭಾವನೆಯಿಂದ ನರಳುತ್ತಿದ್ದೇವೆ. 12 ನೆಯ ಶತಮಾನದ ಶರಣರು ತಮಗೆ ಅನಿಸಿದ್ದನ್ನು ಹೇಳುವ ಗಟ್ಟಿತನವನ್ನು ಬೆಳಸಿಕೊಂಡಿದ್ದರು. ಆದರೆ ಇಂದು ನಾವು ಹೊತ್ತುಬಂದಂತೆ ಕೊಡೆಹಿಡಿಯುವ ಕೆಲಸ ಮಾಡುತ್ತಿದ್ದೇವೆ. ಆತ್ಮವಂಚನೆ ಹೊರಗಿನವರಿಗೆ ಕಾಣುವಂಥದ್ದಲ್ಲ; ನಮ್ಮಳೊಗೆ ನಾವು ನೋಡಿಕೊಂಡಾಗ ತಿಳಿಯುತ್ತು. ಹೀಗಾಗಿಯೇ ಶರಣರು ಹೆಚ್ಚು ಒತ್ತುಕೊಟ್ಟದ್ದು ಆಂತರಿಕ ಶುದ್ಧಿಗೆ. ಮನಸ್ಸೇ ಮಾನವನ ಅವನತಿಗೆ, ಉನ್ನತಿಗೆ ಕಾರಣವಾಗುವುದು. `ಮತ್ತೆ ಕಲ್ಯಾಣ’ ಲೋಕ ಕಲ್ಯಾಣದ ಜೊತೆ ಆತ್ಮ ಕಲ್ಯಾಣವೂ ಆಗಬೇಕೆನ್ನುವುದು ಆಶಯ ಹೊಂದಿದೆ. ಇಂದು ನಮ್ಮ ಮಕ್ಕಳು ಓದುಗಾರರಾಗಿದ್ದರೆಯೇ ಹೊರತು ಸಂಸ್ಕಾರವಂತರಾಗುತ್ತಿಲ್ಲ. ಇಂದು ಸಮಾಜಘಾತುಕ ಕಾರ್ಯಗಳು ನಡೆಯುತ್ತಿರುವುದು ಹೆಚ್ಚಾಗಿ ಓದಿದವರಿಂದಲೇ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳುವರು. ಶರಣರು ಅನುಭವ ಮಂಟಪದ ಮೂಲಕ ಸಂಸ್ಕಾರವನ್ನು ನೀಡುವ ಕೆಲಸ ಮಾಡಿದರು. ನಡೆಯುವವನು ಎಡುವವನಲ್ಲದೆ ಕುಳಿತವನು ಎಡಹುವವೇ ಎನ್ನುವಂತೆ ಏನೂ ಮಾಡದವರನ್ನು ಯಾರೂ ಟೀಕಿಸುವುದಿಲ್ಲ. ಏನಾದರೂ ಒಳಿತನ್ನು ಮಾಡಲು ಹೊರಟಾಗ ಟೀಕೆ-ಟಿಪ್ಪಣಿಗಳು ಸಹಜ. ಆಗ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. ಮನಸ್ಸಿಗೆ ಅಕ್ಕನ, ಅಣ್ಣನ ವಚನಗಳ ಮೂಲಕ ನಮಗೆ ನಾವೇ ಸಂಸ್ಕಾರ ಕೊಟ್ಟುಕೊಳ್ಳಬೇಕು. ನಿಜವಾದ ಮಾಯೆ ಹೊರಗಿರುವುದಿಲ್ಲ; ಒಳಗೇ ಇವೆ. ಕಾಮ, ಕ್ರೋಧ, ಮದ, ಮತ್ಸರಗಳನ್ನು ಮನಸ್ಸಿನಲ್ಲಿಯೇ ಧಮನ ಮಾಡಲು ಸತ್ಸಂಗ, ಅಧ್ಯಯನ ಬೇಕು. ಆದರ್ಶಗಳನ್ನು ಬಿಡದೆ ಸಂಪಾದಿಸುವುದು ತಪ್ಪೇನಲ್ಲ. ಬೆಂಕಿ ಇಡುವುದು ಸುಲಭ; ಬೆಳಕು ಕೊಡುವುದು ಕಷ್ಟಕರವಾದುದು. ಸುಳಿದಾಡುವ ಗಾಳಿಯಲ್ಲಿ ದೀಪಬೆಳಗುವ ಕಷ್ಟಕರವಾದ ಕೆಲಸವನ್ನು ಮತ್ತೆ ಕಲ್ಯಾಣ ಮಾಡುತ್ತಿದೆ. ನಾವು ಹೇಳುವ ಮಾತುಗಳನ್ನು ಮಾಧ್ಯಮಗಳು ಆಂಶಿಕವಾಗಿ ಮಾತ್ರ ಪ್ರಕಟಿಸಿ ಜನರಲ್ಲಿ ಅಸಮಧಾನ ಮೂಡಿಸುವುದು ಸರಿಯಲ್ಲ. ಮಾಧ್ಯಮಗಳು ಜನರಿಗೆ ಪೂರ್ಣವಾಗಿ ಮಾಹಿತಿ ಒದಗಿಸಬೇಕು.
ಲಿಂಗಾಯತ ಒಂದು ಜಾತಿಯಲ್ಲ; ಒಂದು ತತ್ವ. ಅದನ್ನು ಯಾರು ಒಪ್ಪಿಕೊಂಡರೂ ಅವರು ಲಿಂಗಾಯತರೇ. ಅದು ಯಡಿಯೂರಪ್ಪ ಇರಲಿ, ಸಿದ್ದರಾಮಯ್ಯ ಇರಲಿ, ಕುಮಾರಸ್ವಾಮಿ ಇರಲಿ ಅವರೆಲ್ಲರೂ ಲಿಂಗಾಯತರೇ. ಟಿಪ್ಪು ಜಯಂತಿಷ್ಟೇ ಅಲ್ಲ; ಎಲ್ಲ ಜಯಂತಿಗಳನ್ನು ರದ್ದುಗೊಳಿಸಬೇಕು.ಇವುಗಳಿಗೆ ಖರ್ಚು ಮಾಡುವ ಕೋಟಿ ಕೋಟಿ ಹಣವನ್ನು ಕರೆಕಟ್ಟೆಗಳ ಹೂಳೆತ್ತಲು, ಕೆರೆ ತುಂಬಿಸಲು, ಬಳಸಬೇಕು. ಮಹತ್ಮರ ಮಾಹಿತಿಯನ್ನು ಆದಿನ ಶಾಲಾ ಕಾಲೇಜುಗಳಲ್ಲಿ ತಿಳಿಸುವಂತಾಗಬೇಕು.
ಎಲ್ಲಿಯವರೆಗೂ ಜಾತಿ ಹೋಗುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವ ನಮ್ಮ ಮಾತಿನಲ್ಲಿ ಯಾವ ದೋಷವಿದೆ?
`ನ್ಯಾಯ ನಿಷ್ಠುರಿ, ದಕ್ಷಿಣ್ಯ ಪರ ನಾನಲ್ಲ. ಲೋಕ ವಿರೋಧಿ ಶರಣ ಯಾರಿಗೂ ಅಂಜುವವನಲ್ಲ’ ಎನ್ನುವ ಮಾತಿನಂತೆ ನಾವು ನಡೆದುಕೊಳ್ಳುತ್ತಿದ್ದೇವೆ.
ಇಲ್ಲಿನ ಚಿಂತಕರ ಮಾತುಗಳನ್ನು ಸ್ವಾಮಿಗಳು, ರಾಜಕೀಯ ನೇತರರು ಕೇಳಬೇಕು ಎಂದು ನಾವು ಬಯಸುತ್ತೇವೆ. ರಾಜಕೀಯ ನೇತರರು ಬದಲಾವಣೆಯಾದರೆ ಸಮಾಜ ಬದಲಾವಣೆಯಾಗುತ್ತದೆ ಎನ್ನುವ ಭಾವನೆ ನಮ್ಮದು ಎಂದರು.
`ಮನವೆಂಬ ಕಲ್ಯಾಣ’ ಎನ್ನುವ ವಿಷಯ ಕುರಿತಂತೆ ಉಪನ್ಯಾಸ ನೀಡಿದ ಚಿತ್ರದುರ್ಗದ ಡಾ. ಲೋಕೇಶ ಅಗಸನಕಟ್ಟೆ ಇಂದು ನಮ್ಮ ನಡೆಯನ್ನು ಮೆಚ್ಚುವವರಿಗಿಂತ ಚುಚ್ಚುವವರೇ ಹೆಚ್ಚು. ಮತ್ತೆ ಕಲ್ಯಾಣ ಜಾಗೃತಿಯ ಅಭಿಯಾನವಾಗಿರುವಂತೆ; ಪಂಡಿತಾರಾಧ್ಯ ಶ್ರೀಗಳವರು ತಮ್ಮನ್ನು ತಾವು ಅಗ್ನಿದಿವ್ಯಕ್ಕೆ ಒಳಪಡಿಸಿಕೊಳ್ಳುವ ಮಾಧ್ಯಮವಾಗಿದೆ. ಮನಸ್ಸೇ ಒಳಿತಿಗೂ ಕೆಡುಕಿಗೂ ಕಾರಣ. ಮತ್ತೆ ಕಲ್ಯಾಣ ಹೊರಟ ಈ ಸಂದರ್ಭದಲ್ಲಿ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಏನಾದರೂ ಅನಾಹುತವಾದರೆ ಮೊದಲು ಸಾಯುವವನೇ ಮನುಷ್ಯ. 12 ನೆಯ ಶತಮಾನದ ವಚನಕಾರರು ಸಮಾಜವಾದಿ ಸಿದ್ಧಾಂತಗಳನ್ನೇ ಮಂಡಿಸಿದ್ದರು. ಸಮ ಸಮಾಜವನ್ನು ನಿರ್ಮಿಸುವ ಕನಸನ್ನು ಹೊತ್ತವರು ಅವರು. ಇಂದು ಸಂಪತ್ತು ಕೇವಲ ಕೆಲವರ ಕೈಯಲ್ಲಿಯೇ ಏಕೀಕರಣಗೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದ ಸಂಗತಿ. ಹೊರಗಿರುವ ಕಲ್ಯಾಣ ಭೌಗೋಳಿಕ ಕಲ್ಯಾಣ. ಮನಸ್ಸಿನ ಒಳಗಿನ ಇನ್ನೊಂದು ಕಲ್ಯಾಣವಿದೆ. ಬಸವಣ್ಣನ ಕಲ್ಯಾಣದಲ್ಲಿ ಸತ್ಯಶುದ್ಧರಿಗಲ್ಲದೆ ಅನ್ಯರಿಗೆ ಪ್ರವೇಶಿಸುವುದೇ ಕಷ್ಟವಾಗಿತ್ತು. ಗುರುವಾದಡೂ ಕಾಯಕ-ದಾಸೋಹ ಮಾಡಬೇಕಿತ್ತು. ತಾನೂ ಬದುಕಿ, ಇತರರನ್ನೂ ಬದುಕಲು ಬಿಡಬೇಕೆನ್ನುವುದೇ ಶರಣರ ಆಶಯವಾಗಿತ್ತು. ನಾವು ಲೋಕನೀತಿಯನ್ನು ಹೇಳುತ್ತೇವೆ; ಅನುಷ್ಟಾನಕ್ಕೆ ತರಲಾಗುತ್ತಿಲ್ಲ. ಗಾಂಧಿಜಿಯೂ ಪಾಶ್ಚಾತ್ಯ ಚಿಂತನೆಯನ್ನು ಒಪ್ಪುತ್ತಿರಲಿಲ್ಲ. ಮತೀಯವಾದಕ್ಕಿಂತ ಜಾತಿವಾದ ಹೆಚ್ಚು ಅಪಾಯಕಾರಿ. ಕಾಯಕಕ್ಕೆ ಘನತೆಯನ್ನು ತರುವ ಸಲುವಾಗಿ ಶರಣರು ತಮ್ಮ ಹೆಸರಿನ ಜೊತೆಗೆ ತಮ್ಮ ಕಾಯಕದ ಹೆಸರನ್ನೂ ಸೇರಿಸಿಕೊಂಡಿದ್ದರು. ಮತ್ತೆ ಕಲ್ಯಾಣದ ಆಶಯ ಸಹಮತ. ಸಂಪತ್ತಿನ ಹಂಚಿಕೆ ಶ್ರೀಮಂತರಿಗೆ ಬೇಕಾಗಿಲ್ಲ, ಅಕ್ಷರ ಜ್ಞಾನ ಕೆಲವರಿಗೆ ಬೇಕಾಗಿಲ್ಲ. ಇಂಥ ದಿನಮಾನದಲ್ಲಿ ಮತ್ತೆ ಕಲ್ಯಾಣ ಒಂದು ಭರವಸೆಯ ಆಂದೋಲನವಾಗಿದೆ. ಜನಸಾಮಾನ್ಯರೇ ಆಂದೋಲನದ ಕೇಂದ್ರ ಬಿಂದುವಾಗಬೇಕು. ಇಂದು ಜಗತ್ತು ಸಂವೇದನೆಯನ್ನು ಕಳೆದುಕೊಂಡಿದೆ. ಸ್ವಾರ್ಥ ರಹಿತ ಸಮಾಜದ ನಿರ್ಮಾಣದ ಆಶಯ ಶರಣರದ್ದು. ಲೋಕಾಂತ ಮತ್ತು ಏಕಾಂತ ಎರಡರ ಸಮನ್ವಯವನ್ನು ಮಾಡಿದವರು 12 ನೆಯ ಶತಮಾನದ ಶರಣರು. ಮಾಧ್ಯಮಗಳು ಹೇಳುವುದೇ ಪರಮಸತ್ಯ ಎನ್ನುವ ಭ್ರಮೆಯಲ್ಲಿರುವ ಹೊತ್ತಿನಲ್ಲಿ `ಮತ್ತೆ ಕಲ್ಯಾಣ’ ಮರುಭೂಮಿಯ ಓಯಸಿಸ್ಸನಂತಿದೆ. ಈ ಯಾತ್ರೆ ನಮ್ಮನ್ನು ನಾವು ಸ್ವಚ್ಛಗೊಳಿಸುವ ಯಾತ್ರೆಯೂ ಆಗಲಿ. ಮಠದ ಭಕ್ತರು ಒಂದಾಗುವುದು ಸುಲಭ ಆದರೆ ಮಠದ ಮಠಾಧೀಶರು ಒಂದಾಗುವುದು ಕಷ್ಟಕರ ಸಂಗತಿ. ಮಠಾಧೀಶರು ಒಂದಾಗುವ ಸಂಯೋಗ ಈಗ `ಮತ್ತೆ ಕಲ್ಯಾಣ’ದ ಮೂಲಕ ಆಗುತ್ತಿದೆ. ಮಕ್ಕಳೊಡನೆ ನಡೆಯುವ ಸಂವಾದಗೋಷ್ಠಿ ಅತ್ಯಂತ ಪರಿಣಾಮಕಾರಿಯಾಗಿತ್ತು ಎಂದರು.
`ವಚನಕಾರರಲ್ಲಿ ಮಹಿಳಾ ಅಸ್ಮಿತೆ’ ಕುರಿತು ದಾವಣಗೆರೆಯ ಉಪನ್ಯಾಸಕಿ ಸುಮತಿ ಮಾತನಾಡಿ ಮಾತೃಪ್ರಧಾನ ಕುಟುಂಬದಲ್ಲಿ ಮಹಿಳೆಗೆ ಅಗ್ರಸ್ಥಾನವಿತ್ತು. ಆದರೆ ಇಂದು ಪುರುಷಪ್ರಧಾನ ಸಮಾಜದಲ್ಲಿ ಎಲ್ಲ ಸ್ವಾತಂತ್ರ್ಯಗಳನ್ನು ಕಳೆದುಕೊಂಡು ನಿಕೃಷ್ಟವಾಗಿ ಬದುಕುತ್ತಿದ್ದಾಳೆ. ಅಂಥದ್ದರಲ್ಲಿ 12 ನೆಯ ಶತಮಾನದಲ್ಲಿ ಎಂಥ ಹೀನಾಯ ಸ್ಥಿತಿ ಇದ್ದಿತೆಂಬ ಕಲ್ಪನೆ ಮಾಡಿಕೊಳ್ಳಲು ಭಯವಾಗುತ್ತದೆ. ತುಳಿತಕ್ಕೆ ಒಳಗಾದ ಮಹಿಳೆಯರಿಗೆ ಸಮಾನ ಸ್ಥಾನ ಮಾನ ನೀಡಿದ್ದು ಶರಣರದ್ದು. ತನ್ನ ಅಕ್ಕನಿಗಿಲ್ಲದ ಜನಿವಾರದ ಸಂಸ್ಕಾರ ನನಗೂ ಬೇಡ ಎಂದು; ಮಹಿಳಾ ಸ್ವಾತಂತ್ರ್ಯಕ್ಕಾಗಿ ಎಂಟನೆಯ ವಯಸ್ಸಿನಲ್ಲಿಯೇ ಮನೆಬಿಟ್ಟು ಹೊರಡುತ್ತಾರೆ. ಧರ್ಮ ಇಲ್ಲದವರಿಗೆ ಧರ್ಮವನ್ನು, ದೇವರಿಲ್ಲದವರಿಗೆ ದೇವರನ್ನು ಕೊಟ್ಟರು. ವಚನಕಾರರು ಮಿಡಿದ ಮಹಿಳಾ ಅಸ್ಮಿತೆ ಜಗತ್ತೇ ಬೆರಗಾಗುವಂಥದ್ದು. ಆತ್ಮಕ್ಕೆ ಲಿಂಗಭೇದವಿಲ್ಲ ಎಂದು ಮೊದಲು ಗಟ್ಟಿಯಾಗಿ ಹೇಳಿದವರು ವಚನಕಾರರು. ಹೆಣ್ಣು, ಹೊನ್ನು, ಮಣ್ಣು ಮಾಯೆ ಎನ್ನುತ್ತಿದ್ದವರಿಗೆ ಮನದ ಮುಂದಣ ಆಸೆಯೇ ಮಾಯೆ ಎಂದರು. ಚಟ್ಟು-ಮುಟ್ಟು-ಸೂತಕ ಎಂದು ಹೆಣ್ಣನ್ನು ಹೊರಗಿಡುವ ಪದ್ಧತಿ ಈಗಲೂ ಕೆಲವೆಡೆ ಇದೆ. ಆದರೆ ವಚನಕಾರರು ಹೊಲೆಗಂಡಲ್ಲದೆ ಪಿಂಡದ ಆಶ್ರಯವೆಲ್ಲಿ ಎಂದು ಪ್ರಶ್ನಿಸಿದರು. ನಮ್ಮ ಸೂತಕ ಕಳೆದುಕೊಳ್ಳಬೇಕಾದುದು ತನುವಿನಲ್ಲಲ್ಲ; ಮನದಲ್ಲಿ. ಭಕ್ತರಾದವಳಿಗೆ, ಲಿಂಗಧರಿಸಿದವಳಿಗೆ ಯಾವ ಸೂತಕವೂ ಇಲ್ಲ ಎಂದು ಸಾರಿದರು. ಹೆಣ್ಣನ್ನು ಪ್ರತ್ಯಕ್ಷ ದೇವತೆಯಾಗಿ ನೋಡಿದವರು. ಇಂದು ಸಾಮೂಹಿಕ ಅತ್ಯಾಚಾರವೂ ನಡೆಯುತ್ತಿದೆ ಎಂದರೆ ತಲೆತಗ್ಗಿಸಬೇಕಾಗುತ್ತದೆ. ಹೆಣ್ಣಿಗೆ ಕೆಲವೆಡೆ ಇಂದೂ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಇಂಥವಕ್ಕೆಲ್ಲ ನಮಗೆ ವಚನಕಾರರ ವಚನಗಳು ದಾರಿದೀಪವಾಗಬೇಕು ಎಂದರು.
ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಡಾ ದೇವರಾಜು ಸ್ವಾಗತಿಸಿದರು. ವೇದಿಕೆಯ ಮೇಲೆ ಶ್ರೀ ರುದ್ರಮುನಿ ಸ್ವಾಮಿಗಳು, ಶ್ರೀ ಜಯಚಂದ್ರಶೇಖರ ಸ್ವಾಮಿಗಳು, ಶ್ರೀ ಸದಾಶಿವಾಚಾರ್ಯ ಸ್ವಾಮಿಗಳು, ಶಾಸಕರಾದ ಲಿಂಗೇಶ್, ಪ್ರೀತಂಗೌಡ, ಕಸಪ ಅಧ್ಯಕ್ಷ ಮರದೇಗೌಡ ಉಪಸ್ಥಿತರಿದ್ದರು.
ಹೆಚ್ ಎಸ್ ದ್ಯಾಮೇಶ್
ಬೆಳಗ್ಗೆ 11 ಗಂಟೆಗೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ
ಹಾಸನ, ಆಗಸ್ಟ್ 4; ಇಲ್ಲಿನ ಹಸನಾಂಬ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಮಾತನಾಡಿ ಭಗವಂತ ಕೃಪೆ ತೋರಿದರೆ ಏನು ಬೇಕಾದರೂ ಸಾಧನೆ ಮಾಲಿಕ್ಕೆ ಸಾಧ್ಯ, ಹಾಗಾದರೆ ಭಗವಂತ ಕೃಪೆ ತೋರುವುದು ಹೇಗೆ ? ಬಹಳ ಜನ ನಾವು ಅಂದುಕೊಂಡಿರುವಂತೆ ಧ್ಯಾನ, ಪೂಜೆ, ಪ್ರಾರ್ಥನೆಗಳಿಂದ ದೇವರು ಒಲಿಯುತ್ತಾನೆ ಎಂದು. ಆದರೆ ದೇವರು ಧ್ಯಾನ, ಪೂಜೆ ಪ್ರಾರ್ಥನೆಗಿಂತ ಮುಖ್ಯವಾಗಿ ನಡೆ-ನುಡಿ ಶುದ್ಧವಾದಂತಹ ಜೀವನ ಮುಖ್ಯ. ಸಕಲ ಜೀವಾತ್ಮರ ಒಳಿತು ಬಯಸುವಂತಹ ಮನೋಸ್ಥಿತಿ. ಯಾರಿಗೂ ಕೇಡನ್ನು ಬಯಸದೆ ಎಲ್ಲರ ಏಳ್ಗೆಯಲ್ಲಿ ನನ್ನ ಏಳ್ಗೆಯಿದೆ ಎನ್ನುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡಾಗ ಭಗವಂತ ತನ್ನಷ್ಟಕ್ಕೆ ತಾನೆ ಒಲಿಯುತ್ತಾನೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಒಂದು ಕಡೆ ಅತಿ ವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿ. ಒಂದು ಕಡೆ ಭೂಕಂಪ ಇನ್ನೊಂದು ಕಡೆ ಬಿರುಗಾಳಿ, ಒಂದು ಕಡೆ ಅಗ್ನಿಸ್ಪೋಟ ಮತ್ತೊಂದು ಕಡೆ ಜಲಸ್ಪೋಟ. ಈ ಅನಾಹುತಕ್ಕೆ ಕಾರಣ ದೇವರ ಶಾಪವಲ್ಲ; ಮನುಷ್ಯ ಪ್ರಕೃತಿಯ ಮೇಲೆ ನಡೆಸಿದ ಅನ್ಯಾಯ. ಮನುಷ್ಯ ತಾನು ಮಾತ್ರ ಸುಖವಾಗಿ ಇರಬೇಕೆಂದು ಕಬಳಿಸುವ, ದೋಚುವ, ಬಾಚುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾನೆ. ಈ ಭಾಗವನ್ನು ಮಲೆನಾಡು ಎಂದು ಮೊದಲು ಕರೆಯಲಾಗುತ್ತಿತ್ತು. ಈ ತಿಂಗಳಿನಲ್ಲಿಯಂತೂ ವಿಪರೀತ ಮಳೆಯಾಗಿ ಕಾಲಿಡಲೂ ಆಗುತ್ತಿರಲಿಲ್ಲ. ಅಷ್ಟೊಂದು ಮಳೆ ಬರುತ್ತಿತ್ತು. ಕಾಡುಗಳು ತುಂಬಾ ಸಮೃದ್ಧಿಯಾಗಿದ್ದವು. ಮರಗಳು ಎತ್ತರವಾಗಿದ್ದವು. ಆದರೆ ಈಗ ಕಾಡುಗಳು ಹಿಂದಿನಷ್ಟು ದಟ್ಟವಾಗಿ, ವಿಶಾಲವಾಗಿ ಇಲ್ಲ. ಕಾರಣ ಮನುಷ್ಯ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಸುಖವಾಗಿರಲು ಕಾಡುಗಳನ್ನು ಕಡಿಯಲು ಪ್ರಾರಂಭ ಮಾಡಿದ. ಗುಡ್ಡ ಬೆಟ್ಟಗಳನ್ನು ನಾಶ ಮಾಡಿದ. ಅದರ ಪರಿಣಾಮವಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಪ್ರಕೃತಿಯನ್ನು ಮನಸ್ಸಿಗೆ ಬಂದಂತೆ ಬಳಸುತ್ತಿದ್ದಾನೆ. ಒಂದು ಕಡೆ ಪ್ರಕೃತಿಯನ್ನು ನಾಶ ಮಾಡುವವರು ನಾವೇ; ಇನ್ನೊಂದೆಡೆ ದೇವರನ್ನು ಬೇಡುವವರೂ ನಾವೇ. ಇದಕ್ಕಾಗಿ ಹೋಮ, ಅಭಿಷೇಕ ಇತ್ಯಾದಿ ಮಾಡುತ್ತೇವೆ. ಇವುಗಳಿಂದ ಶಾಪಗಳನ್ನು ವಿಮುಕ್ತಿಗೊಳಿಸಿಕೊಳ್ಳಲು ಸಾಧ್ಯವಿಲ್ಲ. ದುರಾಸೆಗೆ ಮನುಷ್ಯ ಕಡಿವಾಣ ಹಾಕಿಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ. ಬದಲಾಗಿ ನಮ್ಮ ನಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಪ್ರಾಕೃತಿಕ ಸಮತೋಲನಕ್ಕೆ ಏನು ಮಾಡಬೇಕು, ನಮ್ಮ ಗಾಳಿ ಶುದ್ಧವಾಗಿರಬೇಕು, ನಮ್ಮ ನೀರು ಶುದ್ಧವಾಗಿರಬೇಕು, ನಮ್ಮ ಭೂಮಿ ಸತ್ವಯುತವಾಗಿರಬೇಕು. ಇವೆಲ್ಲಾ ಆಗಬೇಕೆಂದರೆ ಮನುಷ್ಯ ತಮ್ಮ ದುರಾಸೆಗೆ ಕಡಿವಾಣ ಹಾಕಿಕೊಳ್ಳಬೇಕು. ಬುದ್ಧ ಒಂದು ಕಾಲದಲ್ಲಿ ಹೇಳಿದ್ದು “ಆಸೆಯೇ ದುಖಃಕ್ಕೆ ಮೂಲ” ಎಂದು. ಹಾಗಾದರೆ ಆಸೆಯೇ ಬೇಡವೆ? ಬೇಕು. ಅದು ದುರಾಸೆಯಾಗದ ಹಾಗೆ ಎಚ್ಚರವಹಿಸಬೇಕು. ಆದರೆ ಇವತ್ತು ಮನುಷ್ಯನ ಆಸೆಗಳಿಗೆ ಒಂದು ಮಿತಿ ಇಲ್ಲ. ಅದನ್ನೇ ಅಂಬಿಗರ ಚೌಡಯ್ಯ “ಬಡತನಕ್ಕೆ ಉಂಬುವ ಚಿಂತೆ, ಉಂಡರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೆಡದಾದರೆ ಮರಣದ ಚಿಂತೆ, ಇಂತಿ ಹಲವು ಚಿಂತೆಗಳಲ್ಲಿಪ್ಪರ ಕಂಡೆ ಶಿವ ಚಿಂತೆಯಲ್ಲಿಪ್ಪರೊಬ್ಬರನು ಕಾಣೆ” ಎಂದು ಹೇಳಿರುವುದು. ಇಂದು ಕೂಡಿಡುವುದಕ್ಕೆ ಒಂದು ಮಿತಿಯೇ ಇಲ್ಲ. ಒಂದು ಕಡೆ ಅತಿಯಾದ ಶ್ರೀಮಂತರರು, ಇನ್ನೊಂದು ಕಡೆ ಅತೀ ಬಡವರನ್ನು ಕಾಣುತ್ತೇವೆ. ಇವರಿಬ್ಬರ ನಡುವೆ ಸಮತೋಲನವನ್ನು ಸಾದಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ಸಂಗ್ರಹ ಪ್ರವೃತ್ತಿ. ಇದನ್ನೇ ಶರಣರು ಸಲ್ಲದು ಎಂದು ಹೇಳುತ್ತಾರೆ. ಶರಣರು ಹೇಳಿರುವುದು ದುಡಿದು ಊಟ ಮಾಡಬೇಕು. ಆದರೆ ಕೂಡಿಡಬಾರದು. ಈ ಕೂಡಿಡಬಾರದೆಂಬುದನ್ನೆ ದಾಸೋಹ ಎಂದು ಕರೆದರು. ಈ ಜಗತ್ತಿನಲ್ಲಿರುವ ನಾವು ಬಹಳ ನೆಮ್ಮದಿಯಿಂದ ಇರಬೇಕೆಂದರೆ ಪ್ರತಿಯೊಬ್ಬರೂ ಕೂಡ ಒದಿಲ್ಲೊಂದು ಕಾಯಕ ಮಾಡಬೇಕು. ಕೆಲಸದಲ್ಲಿ ಮೇಲು ಕೀಳು ಇದೆ. ಆದರೆ ಕಾಯಕದಲ್ಲಿ ಮೇಲು ಕೀಳು ಇಲ್ಲ. ಉಪದೇಶ ಮಾಡುವ ಸ್ವಾಮಿ, ಕಸಗುಡಿಸುವವ, ಡಿ ಸಿ ಎಲ್ಲರು ಒಂದೇ. ಸತ್ಯಕ್ಕ ಕಸಗುಡಿಸಿದಳು. ಆದರೆ ಆಕೆ ಕೀಳಾಗಿರಲಿಲ್ಲ. ಹರಳಯ್ಯ ಚಪ್ಪಲಿ ಹೊಲಿದರು. ಅವರು ಕೀಳಲ್ಲ. ಮೇಲು ಕೀಳು ಎಂಬ ತಾರತಮ್ಯ ಭಾವನೆಯನ್ನು ಕಿತ್ತಾಕಿ ಎಲ್ಲರಲ್ಲೂ ಸಮಾನತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕಾಯಕ ಶ್ರದ್ಧೆಯನ್ನು ಶರಣರು ಬೆಳೆಸಿದರು. ಶರಣರು ಹೇಳುತ್ತಾರೆ “ಗುರುವಾದರೂ ಕಾಯಕದಿಂದಲೆ ಜೀವನ್ಮುಕ್ತಿ ಎಂದು. ಗುರು ಲಿಂಗ, ಜಂಗಮವಾದರೂ ಮೊದಲು ಕಾಯಕ ಮಾಡಬೇಕು. ನಾವು ದುಡಿದ ದುಡಿಮೆಯನ್ನು ನಾನೊಬ್ಬನೆ ಬಳಸದೇ ಸಮಾಜದ ಉಪಯೋಗಕ್ಕಾಗಿ ಬಳಸುವುದನ್ನೇ ದಾಸೋಹ ಎಂದರು. ಕಾಯಕ-ದಾಸೋಹ ಪ್ರಜ್ಞೆ ಸಮಾಜದಲ್ಲಿ ಮೂಡಿದರೆ ಎಲ್ಲಿಯೂ ಬಡತನ ಮತ್ತು ಸಂಗ್ರಹ ಪ್ರವೃತ್ತಿ ಇರುವುದಿಲ್ಲ. ಯುವ ಪೀಳಿಗೆಯ ಮೆಲೆ ತುಂಬಾ ಹೊಣೆಗಾರಿಕೆ ಇದೆ. ವಿದ್ಯಾರ್ಥಿಗಳೆಂದರೆ ಮುಂದಿನ ನಾಗರಿಕರು, ನಾಳಿನ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ನಿಮ್ಮ ಮೆಲೆಯೆ ಇದೆ. ನಾಳೆ ನಾವು ಕಟ್ಟುವ ಸಮಾಜ ಹೇಗಿರಬೇಕೆಂದು ವಿದ್ಯಾರ್ಥಿಗಳು ಈಗ ಚಿಂತನೆ ನಡೆಸಬೇಕು. ಇವತ್ತಿನ ಹಾಗೆ ಅನ್ಯಾಯ ವಂಚನೆ ಮೋಸ ದ್ರೋಹ ಇವುಗಳು ಹೀಗೆಯೇ ಮುಂದುವರೆಯಬೇಕೇ ಅಥವಾ ಇವುಗಳಲ್ಲಿ ಪರಿವರ್ತನೆಯನ್ನೇನಾದರೂ ತರಬೇಕೆ? ಇದು ಈಗೆ ಮುಂದುವರೆದರೆ ಒಬ್ಬರು ಇನ್ನೊಬ್ಬರನ್ನು ದ್ವೇಷ ಮಾಡುತ್ತಾ ಹೊಡೆದಾಡುತ್ತಾ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಇರಬೆಕಾಗುತ್ತದೆ. ಆದುದರಿಂದ ಸಮಾಜದ ಎಲ್ಲ ಅನಾರೋಗ್ಯಕರ ವಾತಾವರಣವನ್ನು ಬೇರು ಸಹಿತ ಕಿತ್ತುಹಾಕಲು ಶರಣರು ನಡೆದ ದಾರಿಯಲ್ಲಿ ನಮ್ಮ ವಿದ್ಯಾರ್ಥಿ ಸಮೂಹ ನಡೆಯಬೇಕು. ನಿಮ್ಮ ಜೊತೆಗೆ ನಿಮ್ಮ ತಂದೆ ತಾಯಿಗಳೂ ನಡೆಯುವಂತೆ ಮಾಡಬೇಕು. ಸಮಾಜದಲ್ಲಿ ಯಾರೇ ತಪ್ಪು ಮಾಡಿದರು ಅವರನ್ನು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡುವಾಗ ನಮ್ಮ ಸೌಜನ್ಯವನ್ನೂ ಕೂಡ ಕಳೆದುಕೊಳ್ಲಬಾರದು. ಇನ್ನೊಬ್ಬರ ಬಗ್ಗೆ ಅವಹೇಳನದ ಮಾತುಗಳನ್ನು ಹೇಳುವುದು ಸರಿಯಾದುದಲ್ಲ. ನಾಲಗೆ ಒಳ್ಳೆಯದಾದರೆ ನಾಡೆಲ್ಲಾ ಒಳ್ಳೆಯದು. ಸತ್ಯವನ್ನು ಮುಚ್ಚಿಡಬಾರದು. ನಮ್ಮ ಮೇಲೆ ಈಗ 3 ದಿನಗಳಿಂದ ಮೆಚ್ಚಿಗೆಯ ಮಾತುಗಳೂ ಟೀಕೆಯ ಮಾತುಗಳೂ ಬರುತ್ತಿವೆ. ನಾವು ಸತ್ಯವನ್ನು ಇದ್ದ ಹಾಗೆ ಹೇಳಿದರೆ ಅನೇಕರಿಗೆ ಇಷ್ಟವಾಗುವುದಿಲ್ಲ. ಆದರೆ ಸಾಮಾಜಿಕ ಚಿಂತನೆ ಮತ್ತು ಕಳಕಳಿಯಿಂದಾಗಿ ನಾವು ಸತ್ಯವನ್ನು ಹೇಳುತ್ತಿದ್ದೇವೆ. ಮಕ್ಕಳು ಓದಿನ ಜೊತೆ ವಿವೇಚನಾ ಶೀಲರಾಗಬೇಕು. ಕಾಯಕ, ದಾಸೋಹ ಗುಣವನ್ನು ಬೆಳೆಸಿಕೊಳ್ಳಬೇಕು. ಅಂತರಂಗದ ವಿಚಾರವನ್ನು ನೀವು ಹೆಚ್ಚಿಸಿಕೊಳ್ಳಬೇಕು ಮಾನಸಿಕವಾಗಿ ಸದೃಢರಾಗಬೇಕು ಇದಕ್ಕೆ ವಚನಗಳು ಸಹಕಾರಿ. ಕನಿಷ್ಟ 10 ವಚನಗಳನ್ನಾದರು ಕಂಠಪಾಟ ಮಾಡಿದರೆ ಅವು ನಿಮಗೆ ಸ್ಥೈರ್ಯ ನೀಡುತ್ತವೆ. ನಮ್ಮ ನಿಜವಾದ ದೇವರು ನಮ್ಮ ಮಕ್ಕಳು. ಆದುದರಿಂದ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸಮಾಲೋಚಕರು:
1. ಗಂಗಾದರ ಬಹುಜನ
2. ನಾಗರಾಜ್ ಎ. ಸಿ
ಪ್ರಶ್ನೆ: ದೀಪಕ್:- ಅಂತರ್ಜಾತಿ ವಿವಾಹ ಕಾನೂನು ಜಾರಿಗೊಳಿಸಿದೆ, ಆದರೆ ಜನರಲ್ಲಿ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ ಯಾಕೆ?
ಉತ್ತರ:- ಯಾರನ್ನೂ ಬಲವಂತವಾಗಿ ಅಂತರ್ಜಾತಿ ವಿವಾಹವಾಗುವಂತೆ ಬಲವಂತ ಮಾಡುವಂತಿಲ್ಲ. ಮದುವೆ ಎರಡು ಹೃದಯಗಳ ನಡುವಿವ ಒಲುಮೆಗೆ ಸಂಬಂದಿಸಿದ ವಿಚಾರ. ಮದುವೆಯಾಗುವವರು ಪ್ರೌಢರಾಗಿದ್ದು ಜಾತಿ ಪರಿಗಣಿಸದೇ ಮದುವೆಯಾಗಲು ಅವಕಾಶವಿದೆ. ಆದರೆ ಜಾತಿವಾದಿ ಮನಸ್ಸುಗಳು ಇನ್ನೂ ಇವತ್ತಿನ ಕಾಲಘಟ್ಟಕ್ಕೆ ಹೊಂದಿಕೊಳ್ಳದಿರುವುದರಿಂದ, ಸಮಸಮಾಜಕ್ಕಾಗಿ ಹೋರಾಡಿದ ಬಸವಣ್ಣನವರ ಚಿಂತನೆಗಳನ್ನು ಪಾಲಿಸದಿರುವುದರಿಂದ, ಶರಣರ ಪರಿಕಲ್ಪನೆ ಒಪ್ಪಿಕೊಳ್ಳುವಷ್ಟು ನಾವು ಪ್ರಬುದ್ದರಾಗದಿರುವುದರಿಂದ ಕಾನೂನು ಜಾರಿಯಲ್ಲಿದ್ದರೂ ಮನಃ ಪರಿವರ್ತನೆ ಆಗುತ್ತಿಲ್ಲ
ಪ್ರಶ್ನೆ: ಜಾತಿ ವ್ಯವಸ್ಥೆ ಯಾಕೆ ಬಂತು?
ಉತ್ತರ:- ಸಿಂದೂ ನಾಗರಿಕತೆಗಿಂತ ಹಿಂದೆ ವರ್ಣ ವ್ಯವಸ್ಥೆ ಇರಲಿಲ್ಲ. ಆದರೆ ಕುಲಗಳು ಇದ್ದವು. ಆರ್ಯರ ಗಮನದ ನಂತರ ಸುಮುತಿ ಭಾರ್ಗವ ಮನುಸ್ಮ್ರತಿ ರಚನೆ ಮಾಡುತ್ತಾನೆ. ಅದರಲ್ಲಿ 4 ವರ್ಣಗಳಿದ್ದು, ನಂತರ ಜಾತಿ ವ್ಯವಸ್ಥೆ ಜಾರಿಗೆ ಬರುತ್ತದೆ. ಆದರೆ ವೃತ್ತಿಯು ಮುಂದುವರೆಯಿತು. ನಾಗರಿಕತೆ ಬರುವುದಕ್ಕಿಂತ ಮೊದಲು ಜಾತಿಯತೆ ಇರಲಿಲ್ಲ, ಯಾವಾಗ ನಾನು ಬುದ್ದಿವಂತ, ಶ್ರೀಮಂತ, ಮೇಲು ಎಂಬ ಭಾವನೆ ಜಾಸ್ತಿಯಾಯಿತೋ ಆಗ ಜಾತಿ ಜಾಸ್ತಿಯಾಗಿ ಬೆಳೆಯಿತು.
ಪ್ರಶ್ನೆ: ಅತ್ಯಾಚಾರ, ದುರಾಚಾರ ಜಾಸ್ತಿ ಇದೆ. ಮತ್ತೆ ಕಲ್ಯಾಣ ಸಾಧ್ಯವೇ?
ಉತ್ತರ:- ಮತ್ತೆ ಕಲ್ಯಾಣದ ಮೂಲಕ ವೆಲ್ಲವನ್ನೂ ನಿರ್ಮೂಲನೆ ಮಾಡುತ್ತೇವೆ ಎಂದೇನೂ ಅಲ್ಲ. ಆದರೆ ಸುಮ್ಮನೆ ಕುಳಿತರೆ ಸಮಾಜದ ಅನ್ಯಾಯ ಅಳಿಸಲು ಆಗದು. ಆದುದರಿಂದ ಇದೊಂದು ಪ್ರಯತ್ನ. ಇದರಿಂದ ಸಾಧ್ಯವಾದಷ್ಟು ಬದಲಾವಣೆ ಆಗುತ್ತದೆ ಎಂಬ ನಂಬಿಕೆ ನಮಗಿದೆ. ಮಹಾನುಭಾವರು ಹುಟ್ಟಿದ್ದೇ ಸಮಾಜದ ಕೊಳೆ ತೊಳೆಯುವುದಕ್ಕಾಗಿ. ಅಂತಹ ಪ್ರಯತ್ನವೇ ಮತ್ತೆ ಕಲ್ಯಾಣ.
ಪ್ರಶ್ನೆ:- ಹಳ್ಳಿಗಳಲ್ಲಿ ಮತ್ತೆ ಕಲ್ಯಾಣ ಮಾಡುವ ಮೂಲಕ ಹಳ್ಳಿಗಳಲ್ಲಿರುವ ಮೌಢ್ಯ ನಾಶ ಮಾಡಬಹುದಲ್ಲವೇ?
ಉತ್ತರ:- ಭಾರತೀಯರಲ್ಲಿ ದೇವಸ್ಥಾನಗಳ ಬಗ್ಗೆ ಅಗಾಧವಾದ ನಂಬಿಕೆ ಇದೆ. ಈ ನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಬಸವಣ್ಣನವರು ಮಾಡಿದರು. ಅಂಬೇಡ್ಕರ್, ಗಾಂದಿ, ಕೆರೆಗೆ ಪ್ರವೇಶ, ದೇವಸ್ಥಾನಕ್ಕೆ ಪ್ರವೇಶಕ್ಕಾಗಿ ಹೋರಾಡಿದರು. ಇದನ್ನು ಗಮನಿಸಿಯೇ ಶರಣರು ದೇವರು ದೇವಸ್ಥಾನಗಳಲ್ಲಿ ಮಾತ್ರ ಇಲ್ಲ; ನಮ್ಮಲ್ಲಿಯೇ ಇದೆ, ಆದುದರಿಂದ ಇಷ್ಟಲಿಂಗ ಪೂಜೆಯನ್ನು ತಂದು ದೇಹವೇ ದೇವಾಲಯ ಎಂದು ಜಾರಿಗೆ ತಂದರು. ಹಳ್ಳಿಗಳಲ್ಲಿ ಶರಣರ ಚಿಂತನೆ ಜಾರಿಗಾಗಿ ಹಿಂದೆ `ಶ್ರಾವಣ ಸಂಜೆ’ ಎಂಬ ಕಾರ್ಯಕ್ರವಗಳನ್ನು ಮಾಡಲಾಗಿದೆ.
ಪ್ರಶ್ನೆ:-ಸಾಮಾಜಿಕ ದೌರ್ಜನ್ಯಕ್ಕೆ ವಿದ್ಯೆ ಮತ್ತು ಶ್ರೀಮಂತಿಕೆ ಕಾರಣವೇ?
ಉತ್ತರ:- ಹೌದು. ಇಂದು ವಿದ್ಯಾವಂತರಿಂದ ಮತ್ತು ಶ್ರೀಮಂತರಿಂದಲೆ ಸಾಮಾಜಿಕ ಶೋಷಣೆ ಹೆಚ್ಚಾಗುತ್ತಿದೆ. ನಾವು ಮಾತ್ರ ಸುಖವಾಗಿರಬೆಕೆಂದು ವಿದ್ಯಾವಂತ ವರ್ಗ ಸೃಷ್ಟಿಮಾಡುತ್ತಿದೆ.
ಪ್ರಶ್ನೆ:- ಜಾತಿಯನ್ನು ಬುಡ ಸಮೇತ ಕಿತ್ತಾಕಲು ಎನು ಮಾಡಬೇಕು?
ಉತ್ತರ:-ಜಾತಿ ದೇಹಕ್ಕೆ ಅಂಟಿದ ಚರ್ಮವಾಗಿದೆ. ಜಾತಿಯನ್ನು ಪೂರ್ಣವಾಗಿ ಕಿತ್ತಾಕುವುದು ಕನಸಾಗಿದೆ. ಬುದ್ದ, ಗಾಂಧಿ, ಬಸವಣ್ಣ ಜಾತಿ ಕಿತ್ತಾಕಲು ಪ್ರಯತ್ನಿಸಿ ಸಫಲರಾಗಲಿಲ್ಲ. ಅದಕ್ಕೆ ಬದಲಾಗಿ ಮತೀಯ ಸಾಮರಸ್ಯ ಉಂಟು ಮಾಡಿ ಬದುಕಬೇಕು. ಎಲ್ಲರು ನಮ್ಮವರೇ ಎಂದು ಬದುಕಬೇಕು.
ಪ್ರಶ್ನೆ:-ಸಂವಿಧಾನದಲ್ಲಿ ಜಾತಿಗೆ ಮಹತ್ವ ನೀಡಲಾಗಿದೆ. ಸಮವಿಧಾನವನ್ನು ಬದಲಾಯಿಸುವ ಮೂಲಕ ಜಾತಿಯನ್ನು ನಾಶ ಮಾಡಬಹುದಲ್ಲವೇ?
ಉತ್ತರ:- ಸಂವಿಧಾನ ಅಂದು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ. ಇಂದಿನ ಪೀಳಿಗೆ ಸಂವಿಧಾನದ ಮೂಲ ಆಶಯಗಳನ್ನು ತಿಳಿಯಬೇಕು. ಸಂವಿಧಾನ ಎಲ್ಲಾ ಸಮುದಾಯಗಳಿಗೂ ಮೀಸಲಾತಿ ನೀಡಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕಂಡು ಬಂದಾಗ ಬದಲಾವಣೆ ಮಾಡಲಾಗುವುದು.
ಪ್ರಶ್ನೆ:-ಲಿಂಗಾಯತರು ಬೇರೆ ಜಾತಿಯವರನ್ನು ಮನೆಯೊಳಗೆ ಬಿಟ್ಟುಕೊಳ್ಳದಿರುವುದರಿಂದ ಅವರು ಬಸವಣ್ಣನವರ ಅನುಯಾಯಿಗಳು ಹೇಗಾಗುತ್ತಾರೆ ?
ಉತ್ತರ:-ಶರಣರು ಎಲ್ಲಿಯೂ ಈ ರೀತಿಯ ಚಿಂತನೆಗಳಿಗೆ ಬೆಂಬಲ ನೀಡಿಲ್ಲ. ಆದುದರಿಂದ ನೀವು ನಿಮ್ಮ ತಂದೆ ತಾಯಿಗಳಿಗೆ ಅಸ್ಪೃಶ್ಯತೆ ಆಚರಿಸದಂತೆ ಮನವರಿಕೆ ಮಾಡಿಕೊಡಿ.
ಪ್ರಶ್ನೆ:- ಈಗ ವೀರಶೈವರೇ ಪ್ರತ್ಯೇಕ ಧರ್ಮ, ಲಿಂಗಾಯತರೇ ಪ್ರತ್ಯೇಕ ಧರ್ಮ ಮಾಡಿಕೊಳ್ಳುತ್ತಿರುವುದು ಬಸವಣ್ಣನವರ ಸಮಾನತೆಯ ತತ್ವಕ್ಕೆ ಮಾನವ ದರ್ಮಕ್ಕೆ ವಿರುದ್ಧವಲ್ಲವೇ?
ಉತ್ತರ:- ಲಿಂಗಾಯತ ಧರ್ಮದ ಪ್ರಶ್ನೆ ಬರುವುದಿಲ್ಲ. ಆಡಳಿತಾತ್ಮಕವಾಗಿ ಲಿಂಗಾಯತ ಧರ್ಮದ ಮಾನ್ಯತೆ ವಿಚಾರವಿದೆ. ಲಿಂಗಾಯತರು ಬಸವಣ್ಣನವರ ತತ್ವಗಳನುಸಾರ ಪ್ರತ್ಯೇಕ ಧರ್ಮದ ವಿಚಾರ ಪ್ರಸ್ತಾಪಿಸುತ್ತಿದ್ದಾರೆ.
ಪ್ರಶ್ನೆ:-ಧೂಮಪಾನ ಮತ್ತು ಮಧ್ಯಪಾನ ಕೆಟ್ಟದಾದರೂ ಏಕೆ ಸರ್ಕಾರ ನಿಷೇಧಿಸಿಲ್ಲ?
ಉತ್ತರ: ಸರ್ಕಾರ ಮಾಡಿದೆ. ನಾವು ಮೊದಲು ದುಶ್ಚಟಗಳನ್ನು ಬಿಡಬೇಕು. ಸರ್ಕಾರ ಅಧಿಕಾರಿಗಳ ಮೂಲಕ ದಂಡವಾಕಿ ಪರಿವರ್ತನೆ ಮಾಡಲು ಪ್ರಯತ್ನಿಸುತ್ತಿದೆ.
ಪ್ರಶ್ನೆ:- ಅರ್ಜಿಗಳಲ್ಲಿ ಜಾತಿ ಏಕೆ ಕೇಳಬೇಕು?
ಉತ್ತರ:-ಎಲ್ಲರು ಜಾತಿ ಕಾಲಂಗಳಲ್ಲಿ ಏನನ್ನೂ ಬರೆಯದೇ ಬಿಟ್ಟರೆ ಮುಂದೆ ಸರ್ಕಾರ ಜಾತಿ ಕಾಲಂ ತೆಗೆದುಹಾಕುತ್ತದೆ. ಮೀಸಲಾತಿಯ ಉದ್ದೇಶದಿಂದ ಜಾತಿ ನಮೂದಿಸಲಾಗಿದೆ. ಆಡಳಿತಾತ್ಮಕ ಕಾರಣದಿಂದ.
ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
-ಹೆಚ್ ಎಸ್ ದ್ಯಾಮೇಶ್