ಅಗಸ್ಟ್ ೧, ಸಾಣೇಹಳ್ಳಿ


ಇಂದು ಸಾಣೇಹಳ್ಳಿ ಶ್ರೀ ಮಠದ ಇತಿಹಾಸದಲ್ಲಿ ಸ್ಮರಣಾರ್ಹ ದಿನ. ಬಸವಾದಿ ಶಿವಶರಣರ ಚಿಂತನೆಗಳನ್ನು ಹರಡುವ ನಿಟ್ಟಿನಲ್ಲಿ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿಗಳವರು ಅನೇಕ ಪ್ರಯೋಗಗಳನ್ನು ಮಾಡಿದರು. ಅದೇ ಪರಂಪರೆಯನ್ನು ನಾವು ಇಂದು ಮತ್ತೆಕಲ್ಯಾಣದ ಮೂಲಕ ಮುಂದುವರಿಸಿದ್ದೆವೆ. ಇಂದು ಆದರ್ಶಗಳು ಯಾರಿಗೂ ಬೇಕಾಗಿಲ್ಲ. ಹಣ, ಅಧಿಕಾರಕ್ಕಾಗಿ ಮಾತ್ರ ತಮ್ಮ ಗಮನವನ್ನು ಹರಿಸುತ್ತಿದ್ದಾರೆ. ಮೊದಲು ಅರಿವು, ಆದರ್ಶಗಳು ಮೊದಲಾಗಬೇಕು. ೧೨ನೆಯ ಶತಮಾನದ ಶರಣರು ಅರಿವು ಆಚಾರ ಒಂದಾದವರು. ಅರ್ಥ ಅಧಿಕಾರಕ್ಕಾಗಿ ಆದರ್ಶ ಗಳನ್ನು ಗಾಳಿಗೆ ತೂರಿದವರಲ್ಲ. ಕೇವಲ ಅರ್ಥ ದ ಹಿಂದೆ ಹೋದವರಿಗೆ ನಿರಾಶೆ ಕಟ್ಟಿಟ್ಟಬುತ್ತಿ. ನಾವು ಮಾಡುವ ಕೆಲಸ ನಮಗಷ್ಟೇ ಅಲ್ಲ ಸಮಾಜಕ್ಕೂ ನೆಮ್ಮದಿಯನ್ನು ತಂದುಕೊಡಬೇಕು. ಭಗವಂತ ಸರ್ವಾಂತರ್ಯಾಮಿ. ಎಲ್ಲ ಕಡೆಯೂ ಇದ್ದಾನೆ. ಭಗವಂತನನ್ನು ನಮ್ಮ ವ್ಯಕ್ತಿತ್ವದಲ್ಲೇ ಕಂಡುಕೊಳ್ಳಬೇಕು. ಅಂತರಂಗ ಬಹಿರಂಗ ಶುದ್ದಿಯೇ ದೇವರನ್ನು ಕಾಣುವ ದಾರಿ. ಇದನ್ನೇ ಶರಣರು ನಡೆದು ತೋರಿದರು. ಭಗವಂತನೇ ತಂದೆ, ತಾಯಿ, ಬಂಧು ಎನ್ನುವ ಭಾವ ಬಲಿತರೆ ವ್ಯಕ್ತಿ ದೇವನಾಗುತ್ತಾನೆ. ಶರಣರ ಇಂಥ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸುವುದೇ ಮತ್ತೆಕಲ್ಯಾಣ. ಕಲ್ಯಾಣ ಎಂದರೆ ಒಳಿತು, ಶುಭ, ಅಭ್ಯುದಯ, ಮಂಗಳ, ಲೇಸು. ಇಂಥ ಕಲ್ಯಾಣವನ್ನು ರಾಜ್ಯಾದ್ಯಾಂತ ಪಸರಿಸಬೇಕಾಗಿದೆ. ನಾಡಿನ ಮಕ್ಕಳೆ ನಮಗೆ ದೇವರು. ಅವರ ಅಭ್ಯುದಯವೇ ನಮ್ಮ ಅಭ್ಯುದಯ. ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ನಾವು ಸೋತಿದ್ದೇವೆ. ಪ್ರಕೃತಿ ಮಾತೆಯ ಒಲವನ್ನು ಗಳಿಸಿಕೊಳ್ಳಬೇಕು. ಈ ಯಾನದಲ್ಲಿ ಅನೇಕ ವಿಪತ್ತುಗಳು ಬರಬಹುದು. ಆ ಎಲ್ಲ ವಿಪತ್ತುಗಳು ನಮ್ಮ ವ್ಯಕ್ತಿ ತ್ವವನ್ನು ಗಟ್ಟಿಗೊಳಿಸಲಿಕ್ಕಾಗಿಯೇ ಬರುವಂಥವು ಎಂದು ಭಾವಿಸಿರುವಂಥವರು. ನಟ ಚೇತನ್ ಮಾತನಾಡಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೇನೆ. ನಾನು ಹುಟ್ಟಿ ಬೆಳೆದು ಓದಿದ್ದು ಅಮೇರಿಕಾದಲ್ಲಿ. ಕನ್ನಡದ ಮೇಲಿನ ಸೆಳೆತದಿಂದಾಗಿ ವಾಪಸ್ ಬಂದು ಇಲ್ಲೇ ನೆಲೆಸಿದ್ದೇನೆ. ಮತ್ತೆಕಲ್ಯಾಣ ಎಲ್ಲ ಅಸಮಾನತೆಗಳನ್ನು ತೊಡೆದುಹಾಕಿ ಎಲ್ಲರನ್ನೂ ಒಳಗೊಳ್ಳುವುದೇ ಆಗಿದೆ. ಇದರಲ್ಲಿ ನಾನು ಪಾಲ್ಗೊಳ್ಳುತ್ತಿರುವುದು ಸಂತೋಷವಾಗಿದೆ. ಮಕ್ಕಳಾಗಿ ಉತ್ತಮ ಕನಸುಕಾಣುವುದು ಬಹಳ ಮುಖ್ಯ. ನಿಜವಾದ ಕನಸನ್ನು ನಾವು ಇರುವ ಜಾಗದಲ್ಲಿಯೇ ನನಸು ಮಾಡಿಕೊಳ್ಳಬೇಕು. ಹಣ ಅಷ್ಟೇ ಕನಸಾಗಬಾರದು. ಪರಸ್ಪರ ಪ್ರೀತಿ, ವಿಶ್ವಾಸ, ನಂಬುಗೆಯನ್ನು ನನಸು ಮಾಡುವ ಕನಸುಕಾಣಬೇಕು. ಡಾ. ಶಾಂತವೀರ ಮಹಾಸ್ವಾಮಿಗಳು ಮಾತನಾಡಿ ಸಮಾಜದ ಎಲ್ಲ ವರ್ಗಕ್ಕೆ ಬಸವಾದಿ ಚಿಂತನೆಗಳನ್ನು ತಲುಪಿಸುವುದೇ ಮತ್ತೆ ಕಲ್ಯಾಣ. ಇದು ಬಸವಣ್ಣನವರ ತತ್ವಕ್ಕೆ ಹೊಸ ಆಯಮ ನೀಡುವಂಥದ್ದು. ಬಸವಣ್ಣ ಪ್ರಚಾರದ ಸರಕಲ್ಲ. ಅದು ಬೆಳಕು. ಬೆಳಕನ್ನು ರಾಜ್ಯಾದ್ಯಂತ ಪಸರಿಸುವ ಕೆಲಸ. ಕಠಿಣವಾದ ಕೆಲಸ. ಆಧ್ಯಾತ್ಮದ ದರ್ಶನ ಇಲ್ಲದೆ ಹೋದರೆ ಬದುಕಿನಿಂದ ವಿಮುಖರಾಗುವ ಸಾಧ್ಯತೆ ಇದೆ. ಇಂಥವರಿಗೆ ಬಸವ ತತ್ವ ಮಾರ್ಗದರ್ಶನ ತೋರುವುವುದು ಎನ್ನುವುದನ್ನು ತಿಳಿಸಬೇಕಾಗಿದೆ. ಈ ಕಾರ್ಯಕ್ಕೆ ಶುಭವಷ್ಟೇ ಅಲ್ಲ ಅವರ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಜೊತೆಯಾಗಿ ನಿಲ್ಲುವ ಅವಶ್ಯಕತೆ ಇದೆ ಎಂದರು. ಶ್ರೀ ಪರುಷೋತ್ತಮಾನಂದಪುರಿ ಸ್ವಾಮಿಗಳು, ಶಾಸಕ ಗೂಳಿಹಟ್ಟಿ ಶೇಖರ್, ಬೇರೆ ಬೇರೆ ಜಿಲ್ಲೆಗಳ ಮುಖಂಡರು ಉಪಸ್ಥಿತಿತರಿದ್ದರು. ಸಾಣೇಹಳ್ಳಿ ಗ್ರಾಮದ ರೈತ ಸಣ್ಣಪ್ಪರ ಬಸವರಾಜಪ್ಪ ಶರಣರ ಸ್ಥಬ್ಧ ಚಿತ್ರವುಳ್ಳ ವಿಶೇಷ ವಾಹನಕ್ಕೆ ಮತ್ತೆಕಲ್ಯಾಣದ ಬಾವುಟವನ್ನು ನಿಶಾನೆಯಾಗಿ ತೋರಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಲಾ ಕಾಲೇಜುಗಳ ಸಿಬ್ಬಂದಿ,ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಿಕಾಣಿಕೆ ಸಮರ್ಪಿಸಿದರು. ಸಾವಿರಾರು ಜನ ನಿಂತು ಬೀಳ್ಕೊಟ್ಟರು. ನೂರಾರು ವಾಹನಗಳು ಪೂಜ್ಯರ ವಾಹನವನ್ನು ಹಿಂಬಾಲಿಸಿದವು. ಆರಂಭದಲ್ಲಿ ವಚನಗೀತೆಯ ಪ್ರಾರ್ಥನೆ ನಡೆಸಲಾಯಿತು.